ಹರಪನಹಳ್ಳಿ : ಅಡುಗೆ ಅನಿಲದ (ಎಲ್ಪಿಜಿ) ದರ ಮಿತಿಮೀರಿ ಏರಿಕೆ ಹಾಗೂ ಗ್ಯಾಸ್ ವಿತರಣೆಯಲ್ಲಿ ವ್ಯತ್ಯಯ ಖಂಡಿಸಿ ‘ಶಕ್ತಿ ಅಭಿಯಾನ’ದ ವತಿಯಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ಜರುಗಿತು.
ಡಾ.ಬಿ.ಆರ್.ಅಂಬೇಡ್ಕರ ವೃತ್ತದಿಂದ ತಾಲ್ಲೂಕು ಆಡಳಿತ ಸೌಧಕ್ಕೆ ಆಗಮಿಸಿದ ಶಕ್ತಿ ಅಭಿಯಾನದ ಕಾರ್ಯಕರ್ತರು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಶಕ್ತಿ ಅಭಿಯಾನದ ರಾಜ್ಯ ಸಂಚಾಲಕಿ ಎಂ.ಪಿ.ವೀಣಾ ಮಹಾಂತೇಶ್ ಮಾತನಾಡಿ, ಅಡುಗೆ ಅನಿಲ ದರ ಮಿತಿಮೀರಿ ಏರಿಕೆಯಾಗಿದೆ. ಪ್ರತಿ ಹಳ್ಳಿಯಲ್ಲೂ ಯಾವುದೇ ಕುಟುಂಬ ಒಂದು ಸಿಲಿಂಡರ್ ಪಡೆಯಲು ವಾರಗಟ್ಟಲೆ ಕಾಯಬೇಕಾಗಿದೆ, ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.
ದಿನೇ ದಿನೇ ಗಗನಕ್ಕೇರುತ್ತಿರುವ ಅಡುಗೆ ಅನಿಲದ ಬೆಲೆಯಿಂದಾಗಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಬದುಕು ಅಸ್ತವ್ಯಸ್ತಗೊಂಡಿದೆ. ಬೆಲೆ ಏರಿಕೆಯ ಬರೆಯ ಜೊತೆಗೆ, ತಾಲ್ಲೂಕಿನಲ್ಲಿ ಗ್ಯಾಸ್ ಸರಬರಾಜು ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾಗಿರುವ ರಾಜ್ಯಪಾಲರು ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿ, ತಕ್ಷಣವೇ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಮೂಲಕ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು. ದಾದಾಪೀರ, ಜೀಷಾನ್ ಹ್ಯಾರಿಸ್, ಎಚ್.ನೇತ್ರಾವತಿ, ರೇಣುಕಾ, ಗಾಯತ್ರಿ, ಸಾದಿಕ್, ಶಿವಣ್ಣ, ಗಂಗಜ್ಜಿ ನಾಗರಾಜ್, ಇಸ್ಮಾಯಿಲ್, ರಾಜು ಇತರರಿದ್ದರು.
Leave a comment