ಹರಪನಹಳ್ಳಿ : ಬಿಸಿಲಿನ ತಾಪಮಾನ ಹೆಚ್ಚುತ್ತಿರುವ ಕಾರಣ ನಗರದ ವಿವಿಧೆಡೆ ಇಲ್ಲಿಯ ನಗರಸಭೆ ಅಧಿಕಾರಿಗಳು ಸಾರ್ವಜನಿಕರಿಗಾಗಿ ಉಚಿತ ನೀರಿನ ಅರವಟಿಗೆ ಶನಿವಾರ ಸ್ಥಾಪಿಸಿದ್ದಾರೆ.
ನಿತ್ಯ ತಾಪಮಾನ ಏರಿಕೆ ಆಗುತ್ತಿರುವ ಕಾರಣ, ಸಾರ್ವಜನಿಕರು ನೀರಿನ ದಾಹ ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ. ನಗರದ ಇಜಾರಿ ಶಿರಸಪ್ಪ ವೃತ್ತ (ಬಸ್ ನಿಲ್ದಾಣ)ದ ಬಳಿ, ಕೊಟ್ಟೂರು ರಸ್ತೆಯ ಬಸ್ ನಿಲ್ದಾಣ ಹಾಗೂ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಆರಂಭಿಸಲಾಗಿದ್ದು, ನಗರದಲ್ಲಿ ಓಡಾಡುವ ಸಾರ್ವಜನಿಕರು ಈ ಅವಕಾಶ ಬಳಸಿಕೊಂಡು, ನೀರು ಸೇವಿಸಿ ಎಂದು ಪೌರಾಯುಕ್ತೆ ರೇಣುಕಾ ಎಸ್ ದೇಸಾಯಿ ಅವರು ಮಾಹಿತಿ ನೀಡಿದರು.
ನೀರಿನ ಅರವಟಿಗೆ ಸ್ಥಾಪಿಸಲು ಆಗ್ರಹಿಸಿ ಏ 16ರಂದು ಭಾರತ ಕಮ್ಯುನಿಷ್ಟ್ ಪಕ್ಷ ಪ್ರತಿಭಟನೆ ನಡೆಸಿ ಪೌರಾಯುಕ್ತರಿಗೆ ಮನವಿ ಸಲ್ಲಿಸಿತ್ತು. ಇದು ನಾವು ಮಾಡಿದ ಹೋರಾಟದ ಪ್ರತಿಫಲ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ತಿಳಿಸಿದರು. ನಗರಸಭೆ ಕಚೇರಿ ವ್ಯವಸ್ಥಾಪಕ ಅಶೋಕ ಅವರು ಹಾಗೂ ಸಿಬ್ಬಂದಿ ಇದ್ದರು.
Leave a comment