ಬೆಂಗಳೂರು :ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ, ಕಾಂಗ್ರೆಸ್ ಹೈಕಮಾಂಡ್ ಪ್ರಮುಖ ಜಾತೀಯ ಸಮೀಕರಣಗಳನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಹತ್ತರ ‘ಜಾಣ ನಡೆ’ಯೊಂದನ್ನು ಇಟ್ಟಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಸಂಘಟನೆ ಹಾಗೂ ಆಡಳಿತಕ್ಕೆ ಹೊಸ ರೂಪ ನೀಡಲು ಹೈಕಮಾಂಡ್ ನಾಯಕತ್ವವು ಹೊಸ ಸೂತ್ರವನ್ನು ಸಿದ್ಧಪಡಿಸಿದೆ.
ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ, ಹಾಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ನೀಡಿದ ಬೆನ್ನಲ್ಲೆ ದಲಿತ ಸಮುದಾಯದ ಹಿರಿಯ ಹಾಗೂ ಅನುಭವಿ ನಾಯಕ ಡಾ. ಜಿ. ಪರಮೇಶ್ವರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಸಾಮಾಜಿಕ ನ್ಯಾಯದ ಸಮತೋಲನ ಕಾಯ್ದುಕೊಳ್ಳಲು ಚಿಂತನೆ ನಡೆಸಿದೆ.
ಸದಾ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಹಿಂದುಳಿದ ವರ್ಗದ (ಈಡಿಗ) ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಅವರನ್ನು ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ ಎಂದು ಹೇಳಲಾಗುತ್ತಿದೆ.
ಜಾತಿ ಸಮೀಕರಣಕ್ಕೆ ಹೈಕಮಾಂಡ್ ಮಾಸ್ಟರ್ ಪ್ಲಾನ್?
ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಈ ಸಂಭಾವ್ಯ ಹೊಸ ಬದಲಾವಣೆಯ ಹಿಂದಿನ ಪ್ರಮುಖ ಲೆಕ್ಕಾಚಾರಗಳು ಹೀಗಿವೆ:
ಒಕ್ಕಲಿಗ ಮತಬ್ಯಾಂಕ್ ಭದ್ರತೆಗೆ ಡಿಕೆಶಿ ಸಾರಥ್ಯ:
ಹಳೇ ಮೈಸೂರು ಭಾಗ ಸೇರಿದಂತೆ ರಾಜ್ಯಾದ್ಯಂತ ಒಕ್ಕಲಿಗ ಸಮುದಾಯದ ಹಿಡಿತವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಹೈಕಮಾಂಡ್ ಬಂದಂತಿದೆ.
ದಲಿತ ಸಮುದಾಯಕ್ಕೆ ಪರಮೇಶ್ವರ್ ಬೆಂಬಲ :
ಅಹಿಂದ ಹಾಗೂ ದಲಿತ ಮತಗಳು ಕೈತಪ್ಪದಂತೆ ನೋಡಿಕೊಳ್ಳಲು, ಪಕ್ಷದ ನಿಷ್ಠಾವಂತ ನಾಯಕ ಹಾಗೂ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರಿಗೆ ಮತ್ತೊಮ್ಮೆ ಡಿಸಿಎಂ ಪಟ್ಟ ಕಟ್ಟುವ ಜಾಣ್ಮೆ ಪ್ರದರ್ಶಿಸಲಾಗಿದೆ.
ಹಿಂದುಳಿದ ವರ್ಗಗಳ ಒಲವಿಗೆ ಹರಿಪ್ರಸಾದ್ ಆಯ್ಕೆ:
ದೆಹಲಿ ಮಟ್ಟದಲ್ಲಿ ಹಾಗೂ ರಾಜ್ಯ ರಾಜಕಾರಣದಲ್ಲಿ ಸುದೀರ್ಘ ಅನುಭವ ಹೊಂದಿರುವ ಬಿ.ಕೆ. ಹರಿಪ್ರಸಾದ್ ಅವರಿಗೆ ಕೆಪಿಸಿಸಿ ಸಾರಥ್ಯ ನೀಡುವ ಮೂಲಕ ಹಿಂದುಳಿದ ವರ್ಗಗಳನ್ನು (OBC) ಪಕ್ಷದತ್ತ ಮತ್ತಷ್ಟು ಆಕರ್ಷಿಸುವುದು ಹೈಕಮಾಂಡ್ನ ತಂತ್ರಗಾರಿಕೆಯಾಗಿದೆ.
ಮುನಿಸು ಶಮನಕ್ಕೆ ಹರಸಾಹಸ:
ಲೋಕಸಭೆ ಚುನಾವಣೆಗಳ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಉಂಟಾಗಬಹುದಾದ ಆಂತರಿಕ ಭಿನ್ನಮತ ಹಾಗೂ ನಾಯಕತ್ವ ಬದಲಾವಣೆಯ ಕೂಗಿಗೆ ಬ್ರೇಕ್ ಹಾಕಲು, ಹೈಕಮಾಂಡ್ ಈ ಮೂರು ಪ್ರಮುಖ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ “ತ್ರಿವಳಿ ಸೂತ್ರ”ವನ್ನು ಹೆಣೆದಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಸಂಜೆ 4.05ಕ್ಕೆ ಆರಂಭವಾಗುವ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ ಹಾಗು ಅವರ ಜೊತೆ 14 ಜನ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ.
Leave a comment