ಹರಪನಹಳ್ಳಿ: ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣೆಗಾಗಿ ಮೆ. ಟಾಟಾ ಪವರ್ ಕಂಪನಿ ಲಿಮಿಟೆಡ್ಗೆ ಪರವಾನಗಿ ನೀಡಲು ಮುಂದಾಗಿರುವುದನ್ನು ಅಖಿಲ ಭಾರತ ಕಿಸಾನ್ ಸಭಾ ತೀವ್ರವಾಗಿ ಖಂಡಿಸಿದೆ. ಈ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ, “ಸಾವಿರಾರು ಕೋಟಿ ರೂಪಾಯಿಗಳ ಸಾರ್ವಜನಿಕ ಹೂಡಿಕೆಯಿಂದ ನಿರ್ಮಾಣಗೊಂಡಿರುವ ವಿದ್ಯುತ್ವಿತರಣಾ ಜಾಲವನ್ನು ಕಡೆಗಣಿಸಿ, ಖಾಸಗಿ ಕಂಪನಿಗೆ ಸಮಾನಾಂತರ ಜಾಲ ನಿರ್ಮಿಸಲು ಅವಕಾಶ ನೀಡುವುದು ಸಾರ್ವಜನಿಕ ಸಂಪನ್ಮೂಲಗಳ ಪೋಲಿಗೆ ಕಾರಣವಾಗಲಿದೆ” ಎಂದು ಎಚ್ಚರಿಸಿದ್ದಾರೆ.
ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ಗ್ರಾಹಕರ ಹಣದಿಂದ ದಶಕಗಳ ಕಾಲ ಶ್ರಮಿಸಿ ಕಟ್ಟಿರುವ ಉಪಕೇಂದ್ರಗಳು, ವಿತರಣಾ ಮಾರ್ಗಗಳು ಮತ್ತು ಟ್ರಾನ್ಸ್ಫಾರ್ಮರ್ಗಳ ಬಳಕೆ ಇದರಿಂದ ಕಡಿಮೆಯಾಗಲಿದೆ. ಅಲ್ಲದೆ, ರಾಜ್ಯ ಸ್ವಾಮ್ಯದ ಎಸ್ಕಾಂಗಳ ಆರ್ಥಿಕ ಸ್ಥಿರತೆಗೆ ಭಾರೀ ಪೆಟ್ಟು ಬೀಳಲಿದ್ದು, ರೈತರು ಹಾಗೂ ಗ್ರಾಮೀಣ ಗ್ರಾಹಕರಿಗೆ ಸಿಗುತ್ತಿರುವ ಕಲ್ಯಾಣ ಯೋಜನೆಗಳು ಮತ್ತು ಉದ್ಯೋಗಾವಕಾಶಗಳಿಗೂ ಕುತ್ತು ಬರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಂಪನಿಗೆ ಪರವಾನಗಿ ನೀಡುವುದರಿಂದ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ದೀರ್ಘಕಾಲೀನ ಸ್ಥಿರತೆಯ ಮೇಲೆ ವ್ಯಾಪಕ ದುಷ್ಪರಿಣಾಮ ಉಂಟಾಗಲಿದೆ ಎಂದು ಹಗರಿಗುಡಿಹಳ್ಳಿ ಶಿವರಾಂ, ಹರಿಯಮ್ಮನಹಳ್ಳಿ ಬಸವರಾಜ, ಭೂಮ್ಮಲಿಂಗಪ್ಪ ಹಾಗೂ ರಾಗಿಮಸಲಡ ಹನುಮಂತಪ್ಪ ಮತ್ತಿತರರು ತೀವ್ರವಾಗಿ ವಿರೋಧಿಸಿದ್ದಾರೆ.
Leave a comment