ಹರಪನಹಳ್ಳಿ : ವಿಬಿ ಜಿ ರಾಮ್ ಜಿ ಕಾಯ್ದೆ ಬಗ್ಗೆ ಪ್ರತಿ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.20ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಹರಪನಹಳ್ಳಿ ತಾಲ್ಲೂಕು ಬಿಜೆಪಿ ಸಂಘಟನೆಯ ಮುಖಂಡರ ಸಭೆ ಕರೆಯಲಾಗಿದೆ ಎಂದು ಸಹಕಾರಿ ಸಂಯುಕ್ತ ಸೌಹಾರ್ದ ಬ್ಯಾಂಕ್ ರಾಜ್ಯಾಧ್ಯಕ್ಷ ಜಿ.ನಂಜನಗೌಡ್ರು ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಲಾಪ ಹಾಳು ಮಾಡುವುದೇ ಕಾಂಗ್ರೆಸ್ ಪಕ್ಷದ ಸಂಸತ್ ಸದಸ್ಯರು, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಕೆಲಸ. ಒಂದೇ ವಿಷಯಕ್ಕೆ ವಾರವಿಡಿ ಕಲಾಪ ಹಾಳುಗೆಡುವಿದ್ದಾರೆ. ಅಮೇರಿಕಾದ ಟ್ರಂಪ್ ವಿರುದ್ದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಕ್ಕಾಗಿ ಪುನಃ ಅವರು ಭಾರತದ ಜೊತೆ ಒಪ್ಪಂದಕ್ಕೆ ಮುಂದಾಗಿದ್ದಾರೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಬಾಂಗ್ಲಾ ಜನರು ನಮ್ಮ ದೇಶದಲ್ಲಿ ಸೇರಿಕೊಂಡು ದೇಶದ್ರೋಹ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಎಸ್ಸಿ, ಎಸ್ಟಿ ಹಣ ಹಗಲು ದರೋಡೆ ಮಾಡುತ್ತಿದ್ದಾರೆ. ಲಿಕ್ಕರ್ ಸ್ಕ್ಯಾಮ್ ನಲ್ಲಿ ಮಂತ್ರಿಗಳು ಸಿಕ್ಕಿ ಬಿದ್ದಿದ್ದಾರೆ. ಗೃಹಲಕ್ಷ್ಮಿಯ 5 ಸಾವಿರ ಕೋಟಿ ಹಣಕ್ಕೆ ಲೆಕ್ಕವೇ ಸಿಕ್ಕಿಲ್ಲ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ನಿವೇಶ ಮರಳಿ ಮುಡಾಕ್ಕೆ ಒಪ್ಪಿಸಿದ ತಕ್ಷಣ, ಅಪರಾಧ ಮುಕ್ತಿಯಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಇಷ್ಟೆಲ್ಲಾ ನಡೆದರೂ ರಾಜ್ಯ ಸರ್ಕಾರ ಯಾವ ತನಿಖೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರನ್ನು ಒಂದೆ ವೇದಿಕೆಯಡಿ ಸೇರಿಸಲಾಗುತ್ತಿದೆ. ಪ್ರತಿ ಹಳ್ಳಿಯಲ್ಲಿರುವ ಬಿಜೆಪಿ ಪಕ್ಷದ ಮುಖಂಡರು ಅಂದಿನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ಮನವಿ ಮಾಡಿದರು. ಹರಪನಹಳ್ಳಿಗೆ ಕಲ್ಯಾಣ ಕರ್ನಾಟಕ ಮಂಡಳಿಯಿಂದ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ. ಕೊಟ್ಟೂರು ರಸ್ತೆ ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ ವೃತ್ತಗಳನ್ನು ವೈಜ್ಞಾನಿಕವಾಗಿ ಅಭಿವೃದ್ದಿಪಡಿಸಬೇಕು. ರಾಜ್ಯದಲ್ಲಿ ಗ್ರಾಮೀಣ, ಜಿಲ್ಲೆ ಮತ್ತು ರಾಜ್ಯ ಹೆದ್ದಾರಿಗಳನ್ನು ಗುಂಡಿಗಳಿಂದ ಮುಕ್ತ ಮಾಡಬೇಕು ಎಂದು ಒತ್ತಾಯಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಅಂದಿನ ಸಂಘಟನಾ ಸಮಾವೇಶಕ್ಕೆ ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ವೈ.ದೇವೇಂದ್ರಪ್ಪ, ಶಾಸಕ ಬಿ.ಪಿ.ಹರೀಶ್, ಕೃಷ್ಣನಾಯ್ಕ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ನಂದಿಹಳ್ಳಿ ಹಾಲಪ್ಪ, ರಾಜೇಶ್, ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಿಜೆಪಿ ಮಾಜಿ ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಡಾ.ರಮೇಶ ಕುಮಾರ, ಶಾನುಭೋಗರ ಕೆಂಚಪ್ಪ, ಮುತ್ತಿಗಿ ವಾಗೀಶ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಣಿವಿಹಳ್ಳಿ ಮಂಜುನಾಥ, ಸಹಕಾರ ಪ್ರಕೋಷ್ಠ ಸದಸ್ಯ ಓಂಕಾರಗೌಡ, ಪುರಸಭೆ ಮಾಜಿ ಅಧ್ಯಕ್ಷ ಇಜಂತಕರ ಮಂಜುನಾಥ, ಬಿ.ವೈ.ವೆಂಕಟೇಶನಾಯ್ಕ, ಚೆನ್ನನಗೌಡ, ಕೆ.ಲಿಂಗಾನಂದ, ಬೆಸ್ತರ ರವಿ, ನಿಟ್ಟೂರು ಸಣ್ಣಹಾಲಪ್ಪ, ಬೂದಿ ನವೀನ, ಮೈದೂರು ಮಲ್ಲಿಕಾರ್ಜುನ, ಪ್ರಭು, ಅಕ್ಷಯ್, ಪ್ರಾಣೇಶ್, ಚಾರೆಪ್ಪ ಇತರರಿದ್ದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
‘ಹರಪನಹಳ್ಳಿಯ ತರಳಬಾಳು ಕಲ್ಯಾಣಮಂಟಪದಲ್ಲಿ ಜರುಗಲಿರುವ ವಿಬಿಜಿ ರಾಮ್ ಜಿ ಜಾಗೃತಿ ಸಂಘಟನೆ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡು ಯಶಸ್ವಿಗೊಳಿಸಿ’.
ವೈ.ಡಿ.ಅಣ್ಣಪ್ಪ, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್.
