ಹರಪನಹಳ್ಳಿ : ತಾಲ್ಲೂಕಿನಲ್ಲಿ ಬೆಟ್ಟಿಂಗ್ ಮತ್ತು ಮಟ್ಕಾ ಜೂಜುಕೋರರ ಹಾವಳಿ ಹೆಚ್ಚಾಗಿದ್ದು ಬುಕ್ಕಿಗಳನ್ನು ಗುರುತಿಸಿ ಗಡಿಪಾರು ಮಾಡಬೇಕ ಎಂದು ಸಿಪಿಐ ಎಂಎಲ್ ತಾಲ್ಲೂಕು ಕಾರ್ಯದರ್ಶಿ ಸಂತೋಷ ಗುಳೇದಹಟ್ಟಿ ಒತ್ತಾಯಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ತಾಲೂಕಿನಲ್ಲಿ ಕೆಲವು ಪುಡಾರಿಗಳು ಮತ್ತು ಗೂಂಡಾಗಳು ಬುಕ್ಕಿಗಳಾಗಿ ಅವತಾರ ಎತ್ತಿದ್ದಾರೆ. ಇವರ ಜಾಲಕ್ಕೆ ಸಿಲುಕಿ ಯುವಕರು, ದಿನಗೂಲಿ ಕಾರ್ಮಿಕರು, ಮಾತ್ರವಲ್ಲದೆ ಸರ್ಕಾರಿ ನೌಕರರು ಸಹ ಜೂಜಿನ ಗೀಳಿಗೆ ಬಲಿಯಾಗುತ್ತಿದ್ದಾರೆ. ಐಪಿಎಲ್ ಹುಚ್ಚಿನಿಂದಾಗಿ ಸಾಲದ ಸುಳಿಗೆ ಸಿಲುಕಿ, ಕಿರುಕುಳ ತಾಳಲಾರದೆ ಅನೇಕ ಯುವಕರು ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿರುವ, ಕುಟುಂಬಗಳು ಬೀದಿಗೆ ಬಂದಿರುವ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಐಪಿಎಲ್ ಬೆಟ್ಟಿಂಗ್ ಮತ್ತು ಮಟ್ಕಾ ದಂಧೆಕೋರರನ್ನು ಬಂಧಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಪೊಲೀಸ್ ಇಲಾಖೆಗೆ ಸಿಪಿಐ(ಎಂಎಲ್) ಆಗ್ರಹಗಳೇನು?
- ಮುಂಜಾಗ್ರತಾ ಕ್ರಮ: ಐಪಿಎಲ್ ಆರಂಭಕ್ಕೂ ಮುನ್ನವೇ ಬುಕ್ಕಿಗಳ ಮೇಲೆ ನಿಗಾ ಇಡಬೇಕು.
- ಗಡಿಪಾರಿಗೆ ಒತ್ತಾಯ: ತಾಲೂಕಿನಲ್ಲಿ ಜೂಜು ಆಡಿಸುವ ಬುಕ್ಕಿಗಳನ್ನು ಗುರುತಿಸಿ, ಐಪಿಎಲ್ ಟೂರ್ನಿ ಮುಗಿಯುವವರೆಗೂ ಅವರನ್ನು ಗಡಿಪಾರು ಮಾಡಬೇಕು.
- ಕಠಿಣ ಕಾನೂನು ಕ್ರಮ: ಗೂಂಡಾ ಹಾಗೂ ಪುಡಾರಿತನದಿಂದ ಬೆಟ್ಟಿಂಗ್ ದಂಧೆ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.
- ಗ್ಯಾಂಬ್ಲಿಂಗ್ ಮುಕ್ತ ತಾಲೂಕು: ಹರಪನಹಳ್ಳಿಯನ್ನು ಜೂಜು ಮುಕ್ತ ತಾಲೂಕನ್ನಾಗಿ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ಶ್ರಮಿಸಬೇಕು.
ಇದೇ ವೇಳೆ, “ಈ ಬೆಟ್ಟಿಂಗ್ ಜಾಲದಲ್ಲಿ ಇಲಾಖೆಯ ಕೆಲವು ಸಿಬ್ಬಂದಿಯೂ ಶಾಮೀಲಾಗಿರುವ ಬಗ್ಗೆ ಈ ಹಿಂದೆಯೂ ವರದಿಗಳಾಗಿವೆ. ಹೀಗಾಗಿ ಹಿರಿಯ ಅಧಿಕಾರಿಗಳು ಖುದ್ದು ಮುತುವರ್ಜಿ ವಹಿಸಿ ಈ ಜಾಲವನ್ನು ಭೇದಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆಯ ಕರೆ
ಯುವಕರು, ಜವಾಬ್ದಾರಿಯುತ ನೌಕರರು ಹಾಗೂ ಕಾರ್ಮಿಕರು ಯಾವುದೇ ಕಾರಣಕ್ಕೂ ಐಪಿಎಲ್ ಬೆಟ್ಟಿಂಗ್ನಂತಹ ಜೂಜಿನ ಗೀಳಿಗೆ ಬೀಳಬಾರದು. ಶ್ರಮದ ಹಣವನ್ನು ಉಳಿಸಿ, ತಮ್ಮ ಕುಟುಂಬವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬೇಕು ಎಂದು ಸಂತೋಷ್ ಗುಳದಟ್ಟಿ ಅವರು ಈ ಮೂಲಕ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.
Leave a comment