ಬೆಂಗಳೂರು: ರಾಜ್ಯ ಸರ್ಕಾರವು ಗಾರ್ಮೆಂಟ್ಸ್, ಮನೆಗೆಲಸ ಹಾಗೂ ನೈರ್ಮಲ್ಯ ಕಾರ್ಮಿಕರು ಸೇರಿದಂತೆ ವಿವಿಧ ಅಸಂಘಟಿತ ವಲಯದ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿರುವುದನ್ನು ‘ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್’ (ಎಐಸಿಸಿಟಿಯು) ಸ್ವಾಗತಿಸಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನವನ್ನು ತಿಂಗಳಿಗೆ ₹42,000 ಕ್ಕೆ ನಿಗದಿಪಡಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಸರ್ಕಾರದ ಹೊಸ ಪರಿಷ್ಕರಣೆಯ ಅನ್ವಯ ರಾಜ್ಯದಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:
- ವಲಯ 1: ₹23,376.43 ರಿಂದ ₹31,114.02 ರವರೆಗೆ.
- ವಲಯ 2: ₹21,251.30 ರಿಂದ ₹28,285.47 ರವರೆಗೆ.
- ವಲಯ 3: ₹19,319.36 ರಿಂದ ₹25,714.07 ರವರೆಗೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್, ‘ಸರ್ಕಾರದ ಈ ವೇತನ ಪರಿಷ್ಕರಣೆ ಕ್ರಮವು ಸ್ವಾಗತಾರ್ಹ. ಆದರೆ, ಪ್ರಸ್ತುತ ದಿನಮಾನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಿತಿಮೀರಿದ್ದು, ಶ್ರಮಿಕ ವರ್ಗದ ಜೀವನ ನಿರ್ವಹಣಾ ವೆಚ್ಚ ದುಬಾರಿಯಾಗಿದೆ. ಹೀಗಾಗಿ ಮಾಸಿಕ ₹42 ಸಾವಿರ ಕನಿಷ್ಠ ವೇತನ ನೀಡುವತ್ತ ಸರ್ಕಾರ ಗಂಭೀರವಾಗಿ ಚಿಂತಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಪರಿಷ್ಕೃತ ವೇತನವು ಕೇವಲ ಆದೇಶಕ್ಕೆ ಸೀಮಿತವಾಗದೆ, ಎಲ್ಲಾ ವಲಯಗಳಲ್ಲಿ ಕಾರ್ಮಿಕರಿಗೆ ಕಟ್ಟುನಿಟ್ಟಾಗಿ ತಲುಪುವಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು. ಯಾವುದೇ ಕಾರಣಕ್ಕೂ ಕಾರ್ಮಿಕರ ಶೋಷಣೆಯಾಗದಂತೆ ಎಚ್ಚರವಹಿಸಬೇಕು’ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
Leave a comment