ಹರಪನಹಳ್ಳಿ: ಜಮೀನುಗಳಲ್ಲಿ 400 ಕೆವಿ ವಿದ್ಯುತ್ ಟವರ್ (ಗೋಪುರ) ನಿರ್ಮಿಸುವ ಸರ್ಕಾರದ ಯೋಜನೆಗೆ ಹರಪನಹಳ್ಳಿ ಹಾಗೂ ಹಡಗಲಿ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಂಡರು. ಭೂಮಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಜೀವನ ಈ ಯೋಜನೆಯಿಂದ ದುಸ್ತರವಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮೈದೂರು ಗ್ರಾಮದ ರೈತ ಶ್ರೀನಿವಾಸ ಗೌಡ ಮಾತನಾಡಿ, “ಹೊಲಗಳಲ್ಲಿ ಹೈ-ಟೆನ್ಷನ್ ವಿದ್ಯುತ್ ಲೈನ್ಗಳು ಹಾದುಹೋಗುವುದರಿಂದ ವಿದ್ಯುತ್ ಗೋಪುರದ ಕೆಳಗೆ ಯಾವುದೇ ರೀತಿಯ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು. ಹೈ-ಲೈನ್ ಕೆಳಗೆ ಕೆಲಸ ಮಾಡಲು ತೀವ್ರ ಅಪಾಯ ಇರುವುದರಿಂದ ಜಮೀನುಗಳಿಗೆ ಬರಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇದು ದೈನಂದಿನ ಕೃಷಿ ಕೆಲಸಗಳ ಮೇಲೆ ಭಾರಿ ಹೊಡೆತ ನೀಡಿದೆ. ಆರಂಭದಲ್ಲಿ ರೈತರಿಗೆ ಹೆಚ್ಚಿನ ಪರಿಹಾರದ ಆಸೆ ತೋರಿಸಿ ಒಪ್ಪಿಸಿದ್ದ ಅಧಿಕಾರಿಗಳು, ಈಗ ಗೋಪುರ ಅಳವಡಿಸುವ ಸಮಯದಲ್ಲಿ ಮಾತು ಬದಲಿಸಿ ವಂಚಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಪ್ರಗತಿಪರ ರೈತ ಪ್ರದೀಪ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಮ್ಮ 6 ಎಕರೆ ಜಮೀನಿನಲ್ಲಿ ಗೋಪುರ ನಿರ್ಮಿಸಲು ಮುಂದಾಗಿದ್ದಾರೆ. ಅಲ್ಲಿ ದೊಡ್ಡ ಮಟ್ಟದ ಕೃಷಿ ಹಾಗೂ ಉದ್ಯೋಗ ಸೃಷ್ಟಿಸುವ ಯೋಜನೆ ನಮ್ಮದಾಗಿತ್ತು. ಈಗ ಈ ಗೋಪುರದಿಂದ ನಮ್ಮ ಕನಸು ನುಚ್ಚುನೂರಾಗಿದೆ. ಸರ್ಕಾರ ನಮಗೆ ಶಾಶ್ವತ ಪರಿಹಾರ ನೀಡಬೇಕು ಇಲ್ಲವೇ ವಾರ್ಷಿಕ ಗೌರವಧನ ನೀಡಬೇಕು. ಇಲ್ಲದಿದ್ದರೆ ನಾವು ಕಾನೂನು ಹೋರಾಟ ಮಾಡುವುದು ಗ್ಯಾರಂಟಿ,” ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮೈದೂರು ಗ್ರಾಮದ ಚನ್ನಬಸವನಗೌಡ, ನಾಗರಾಜ್, ಕೆಂಚಪ್ಪ, ನಿಂಗಪ್ಪ, ತಳಕಲ್ಲು ಗ್ರಾಮದ ಎಂ. ಚನ್ನಬಸನಗೌಡ, ಕರೆಗೌಡ, ಶಿವಕುಮಾರ ಸೇರಿದಂತೆ ಉತ್ತಂಗಿ, ಬೇವೂರು ಮತ್ತು ಇಟ್ಟಗಿ ಗ್ರಾಮದ ಹಲವು ರೈತರು ಉಪಸ್ಥಿತರಿದ್ದರು.
Leave a comment