ಹರಪನಹಳ್ಳಿ : ಮಾಜಿ ಶಾಸಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ 96ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜೂನ್ 17ರಂದು ದಾವಣಗೆರೆ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ವಧು-ವರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಜೂನ್ 10ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅರಸೀಕೆರೆ-ಬಿಳಿಚೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಮ್ಮತ್ತಹಳ್ಳಿ ಮಂಜುನಾಥ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜೂನ್ 17ರಂದು ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಬಾಪೂಜಿ ಎಂ.ಬಿ.ಎ. ಕಾಲೇಜು ಮೈದಾನದಲ್ಲಿ ವಿವಾಹ ಮಹೋತ್ಸವ ಜರುಗಲಿದೆ. ಸಾಮೂಹಿಕ ವಿವಾಹಗಳು ಸಮಾಜದಲ್ಲಿ ದುಂದುವೆಚ್ಚವನ್ನು ನಿಯಂತ್ರಿಸುತ್ತವೆ. ಹೀಗಾಗಿ ಸಾರ್ವಜನಿಕರು ಹಾಗೂ ಎಲ್ಲ ಜಾತಿಯ ಬಡ ಕುಟುಂಬಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಸರ್ವಧರ್ಮೀಯರಿಗೂ ಅವಕಾಶ, ವಿಶೇಷ ಉಡುಗೊರೆ
ಎಸ್.ಎಂ.ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುಖಂಡ ಪರಶುರಾಮಪ್ಪ ಮಾತನಾಡಿ, “ವಿವಾಹವಾಗುವ ವಧುವಿಗೆ ಬಟ್ಟೆ, ಚಿನ್ನದ ತಾಳಿ, ಕಾಲುಂಗುರ ಹಾಗೂ ವರನಿಗೆ ಉಡುಪು ಸೇರಿದಂತೆ ವಿಶೇಷ ಉಡುಗೊರೆಗಳನ್ನು ನೀಡಲಾಗುವುದು. ವಧು-ವರರಿಗೆ ವಸತಿ ಸೌಲಭ್ಯವಿದ್ದು, ಮದುವೆಗೆ ಆಗಮಿಸುವ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ವಿಧುರ ಹಾಗೂ ವಿಧವೆಯರಿಗೂ ಮರುವಿವಾಹಕ್ಕೆ ಮುಕ್ತ ಅವಕಾಶವಿದೆ” ಎಂದರು.
ಮುಖಂಡ ಮಂಜುನಾಥ ಮಾತನಾಡಿ, “ಈ ಸಾಮೂಹಿಕ ವಿವಾಹದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲ ಧರ್ಮದವರಿಗೂ ಅವರವರ ಧಾರ್ಮಿಕ ಸಂಪ್ರದಾಯದಂತೆ ವಿವಾಹವಾಗಲು ಅನುಕೂಲ ಮಾಡಿಕೊಡಲಾಗುವುದು. ಮದುವೆಯ ನಂತರ ಒಂದೇ ವೇದಿಕೆಯಲ್ಲಿ ‘ಸರ್ವಧರ್ಮ ಸಮ್ಮೇಳನ’ ನಡೆಯಲಿದೆ” ಎಂದು ವಿವರಿಸಿದರು.
ಬೇಕಾಗುವ ಪ್ರಮುಖ ದಾಖಲೆಗಳು:
-
ವಧು-ವರರ ಆಧಾರ್ ಕಾರ್ಡ್ ಹಾಗೂ 2 ಭಾವಚಿತ್ರಗಳು
-
ಶಾಲಾ ವರ್ಗಾವಣೆ ಪತ್ರ (TC) ಅಥವಾ ವಯಸ್ಸಿನ ದೃಢೀಕರಣ ಪತ್ರ
-
ಜಾತಿ ಪ್ರಮಾಣ ಪತ್ರ
-
ವಿವಾಹ ಆಗದಿರುವ ಬಗ್ಗೆ ಗ್ರಾಮ ಪಂಚಾಯಿತಿಯಿಂದ ಪಡೆದ ದೃಢೀಕರಣ ಪತ್ರ
ನೋಂದಣಿಗಾಗಿ ಸಂಪರ್ಕಿಸಿ:
ಹರಪನಹಳ್ಳಿ ತಾಲ್ಲೂಕಿನ ಸಾರ್ವಜನಿಕರು ಹೆಸರು ನೋಂದಾಯಿಸಲು ಹಾಗೂ ದಾಖಲಾತಿಗಳನ್ನು ಸಲ್ಲಿಸಲು ಮುಖಂಡರಾದ ಎಂ.ವಿ.ಅಂಜಿನಪ್ಪ (9448338704) ಹಾಗೂ ಮಂಜನಾಯ್ಕ (9886344583) ಅವರನ್ನು ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ, ಮುಖಂಡರಾದ ಟಿ.ವೆಂಕಟೇಶ್, ಮೈದೂರು ರಾಮಪ್ಪ, ಹುಲಿಕಟ್ಟಿ ಚಂದ್ರಪ್ಪ, ಎಚ್.ವಸಂತಪ್ಪ, ಎಲ್.ಮಂಜನಾಯ್ಕ, ಹರೀಶ ದಂಡಿನ, ಗುಡಿನಾಗರಾಜ್, ಚಿಕ್ಕೇರಿ ಬಸಪ್ಪ, ಚೆನ್ನಬಸಪ್ಪ ಉಪಸ್ಥಿತರಿದ್ದರು.
Leave a comment