ಹರಪನಹಳ್ಳಿ : ಮೊಬೈಲ್ಗೆ ನೆಟ್ವರ್ಕ್ ಟವರ್ ಹೇಗೆ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ. ದೇವಸ್ಥಾನಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುವ ಶಕ್ತಿಕೇಂದ್ರಗಳಾಗಿವೆ” ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.
ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಬಸವೇಶ್ವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗೋಪುರದ ಮೇಲಿರುವ ಕಳಸವು ದೇವಸ್ಥಾನದ ಪವಿತ್ರ ಶಕ್ತಿಯ ಸಂಕೇತವಾಗಿದೆ. ಭಗವಂತನ ದಿವ್ಯಶಕ್ತಿಯು ಈ ಕಳಸದ ಮೂಲಕ ಇಡೀ ಊರಿಗೆ ಹರಡುತ್ತದೆ ಹಾಗೂ ಪ್ರಕೃತಿಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗ್ರಾಮಸ್ಥರು ಪ್ರತಿದಿನ ದೇವರ ಸ್ಮರಣೆ ಮಾಡಬೇಕು. ಭಗವಂತನನ್ನು ಅರಿತಾಗ ಮಾತ್ರ ಅರಿವಿನ ನಿಜವಾದ ಜ್ಞಾನ ಉಂಟಾಗುತ್ತದೆ” ಎಂದು ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮತ್ತು ಅಡವಿಹಳ್ಳಿಯ ಸದ್ಗುರು ಶಿವಯೋಗಿ ವೀರ ಗಂಗಾಧರ ಹಾಲಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ನಂಜನಗೌಡ. ಅಧ್ಯಕ್ಷ ಎ.ಜೆ.ಮಂಜುನಾಥ ಗೌಡ, ಉಪಾಧ್ಯಕ್ಷ ಹಾವನೂರು ಹಾಲಪ್ಪ, ಪ್ರಧಾನ ಕಾರ್ಯದರ್ಶಿ ಗುಬ್ಬವ್ವರ ಪೂಜಾರ್ ಬಸವರಾಜ, ಖಜಾಂಚಿ ಬಿ.ಜಿ.ಶರಣಪ್ಪ, ಸಹ ಕಾರ್ಯದರ್ಶಿ ನಿಂಬಳಗೇರಿ ಬಸವರಾಜ, ಮಲ್ಲಿಕಾರ್ಜುನ ಕಲ್ಮಠ, ಕರಿಬಸವರಾಜ, ಓಂಕಾರಗೌಡ, ಸುರೇಶ, ಪಿ.ಅರುಣ್ ಕುಮಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.
Leave a comment