ಹರಪನಹಳ್ಳಿ (ವಿಜಯನಗರ ಜಿಲ್ಲೆ ) : ಪಾಳೆಗಾರ ರಾಜಸೋಮಶೇಖರ ನಾಯಕರ ಕಾಲದ ನಿರ್ಮಾಣವಾದ ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆ ಆಡಳಿತಾಧಿಕಾರಿ ನೇಮಿಸಲು ದೇವಸ್ಥಾನ ಸಮಿತಿ ಅವಕಾಶ ಕೊಡುವುದಿಲ್ಲ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಚ್.ಕೆ. ಹಾಲೇಶ ತಿಳಿಸಿದರು.
ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿ ಆದಾಯವಿಲ್ಲ, ಆಸ್ತಿಯಿಲ್ಲ. ಸಮಿತಿಗೆ ಸರ್ಕಾರದ ಅನುದಾನವಿಲ್ಲ, ಭಕ್ತರಿಂದ ಸಂಗ್ರಹಿಸುವ ಸಾವಿರಾರು ರೂಪಾಯಿ ದೇಣಿಗೆಯಲ್ಲಿಯೇ ಸಮಿತಿ ಅಭಿವೃದ್ಧಿ ಪಡಿಸುತ್ತಿದೆ. ಇಲ್ಲಿ ಭ್ರಷ್ಟಾಚಾರ ನಡೆದಿರುವ ಆರೋಪ ನಿರಾಧಾರ ಎಂದರು.
ದಿವಂಗತ ಪಿರಂಗಿ ದುರ್ಗದಯ್ಯ ಅಧ್ಯಕ್ಷರಾಗಿದ್ದ ಸರ್ಕಾರಿ ಭೂಗಳ್ಳರ ವಿರೋಧಿ ಸಮಿತಿಯ ಹೋರಾಟದ ಫಲವಾಗಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಜಾಗ ಉಳಿದಿದೆ ಎಂದರು.
ಹಿಂದೆ ಒಟ್ಟು 186 ಎಕರೆ ಕೆರೆ ಪರಂಪೋಕಿತ್ತು. 1962ರಲ್ಲಿ 68.66 ಎಕರೆ ಪಟ್ಟಾ ವಿತರಿಸಲಾಗಿದೆ. ಕೋಟೆ ಆಂಜನೇಯ ದೇವಸ್ಥಾನಕ್ಕೆ 6.8 ಎಕರೆ, ಕೋಟೆ ಕಾಳಮ್ಮ ದೇವಸ್ಥಾನಕ್ಕೆ 6.58, ಜೈನ ಬಸದಿಗೆ 2.70 ಎಕರೆ, ಎಡಿಬಿ ಕಾಲೇಜಿಗೆ 6 ಎಕರೆ, ಸೊಸೈಟಿಗೆ 6 ಎಕರೆ ನಿಗಧಿಪಡಿಸಿ ಇದೇ ತಹಶೀಲ್ದಾರರು ಹಂಚಿಕೆ ಮಾಡಿ ಆದೇಶಿಸಿದ್ದಾರೆ.
ಈ ಜಾಗದಲ್ಲಿ ಆಗಿರುವ ಒತ್ತುವರಿ ಕಣ್ಣಿಗೆ ಕಾಣುತ್ತಿದೆ, ಆದರೆ ಇಲ್ಲಿಯ ತಹಶೀಲ್ದಾರ ಅವರೂ ದೇವಸ್ಥಾನ ಜಾಗ ಒತ್ತುವರಿ ಆಗಿಲ್ಲ ಎಂದು ಹೈಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೆ ಒತ್ತುವರಿದಾರರ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದರೂ, ಕ್ರಮವಹಿಸಲು ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ದ ಹೋರಾಟ ನಿಲ್ಲಿಸಲ್ಲ ಎಂದು ಎಚ್ಚರಿಕೆ ನೀಡಿದರು.
ಕೋಟ್ಯಂತರ ರೂಪಾಯಿ ಆದಾಯವಿರುವ ಚಿಗಟೇರಿ ನಾರದಮುನಿ ಸೇರಿ ವಿವಿಧ ದೇವಸ್ಥಾನಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಆದರೆ ಕೋಟೆ ಆಂಜನೇಯ ದೇವಸ್ಥಾನಕ್ಕೆ ಆಡಳಿತಾಧಿಕಾರಿ ನೇಮಿಸುವ ಹಿಂದಿನ ಹುನ್ನಾರವೇನು ಎಂದು ಪ್ರಶ್ನಿಸಿದರು.
ಇಲಾಖೆ ವ್ಯಾಪ್ತಿಗೆ ಸೇರಿರುವ ಉಚ್ಚಂಗಿದುರ್ಗದ ಉಚ್ಚೆಂಗೆಮ್ಮ, ದೇವರ ತಿಮ್ಲಾಲಪುರದ ಲಕ್ಷ್ಮೀ ವೆಂಕಟೇಶ್ವರ, ಕೂಲಹಳ್ಳಿಯ ಗೋಣಿಬಸವೇಶ್ವರ ಸೇರಿ 54 ದೇವಾಲಯಗಳು ಮುಜುರಾಯಿಗೆ ಒಳಪಟ್ಟಿವೆ. ಆ ದೇವಸ್ಥಾನಗಳು ಇಂದಿಗೂ ಅಭಿವೃದ್ಧಿ ಕಾಣದೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ ಎಂದು ದೂರಿದರು. ಮುಖಂಡರಾದ ಗುಡಿಹಳ್ಳಿ ಹಾಲೇಶ ಹಾಗೂ ಎಚ್. ವೆಂಕಟೇಶ್ ಮಾತನಾಡಿ, ಭಕ್ತರ ಭಾವನೆಗಳಿಗೆ ದಕ್ಕೆ ತರುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸದೇ, ದೇವಸ್ಥಾನ ಸಮಿತಿಗೆ ಸಹಕಾರ ನೀಡಬೇಕು ಎಂದರು.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸಂಚಾಲಕ ಎಚ್.ಎಂ. ಜಗದೀಶ್ ಮಾತನಾಡಿ, ಈಗಿರುವ ಸಮಿತಿ ದೇವಸ್ಥಾನ ಉತ್ತಮವಾಗಿ ಅಭಿವೃದ್ದಿಪಡಿಸಿದೆ. ಯಾವುದೇ ಕಾರಣಕ್ಕೂ ಇದನ್ನು ಮುಜರಾಯಿ ಇಲಾಖೆಗೆ ಸೇರಿಸಬಾರದು ಎಂದು ಆಗ್ರಹಿಸಿದರು. ಆಂಜನೇಯ ಸೇವಾ ಸಮಿತಿಯ ಪ್ರಮುಖರಾದ ದ್ಯಾಮಜ್ಜಿ ಹನುಮಂತಪ್ಪ, ಮ್ಯಾಕಿ ಸಣ್ಣ ಹಾಲಪ್ಪ, ಚಿಕ್ಕೇರಿ ಯಂಕಪ್ಪ, ಕಮ್ಮಾರ ಸಣ್ಣ ಹಾಲಪ್ಪ, ಚಿಕ್ಕೇರಿ ಬಸಪ್ಪ, ದ್ಯಾಮಜ್ಜೆ ದಂಡ್ಯೆಪ್ಪ, ತಿಮ್ಮಣ್ಣ, ನಿಟ್ಟೂರು ತಿಮ್ಮಪ್ಪ, ಗುಂಡಿ ಮಂಜುನಾಥ, ರಾಯದುರ್ಗದ ವಾಗೀಶ, ಪಟ್ನಾಮದ ಪರುಶುರಾಮ, ಚಿಕ್ಕೆರಿ ಪಾಲಾಕ್ಷಪ್ಪ, ಪೂಜಾರ್ ಮಂಜಣ್ಣ, ಬಿದ್ದಪ್ಪ, ಆಲೂರು ಶ್ರೀನಿವಾಸ ಸೇರಿ ಅನೇಕರಿದ್ದರು.
Leave a comment