ಹರಪನಹಳ್ಳಿ : “ಇದು ಕೇವಲ ಶಿಬಿರವಲ್ಲ, ಕುಟುಂಬಗಳನ್ನು ಕಟ್ಟುವ ಹಾಗೂ ಹೆಣ್ಣುಮಕ್ಕಳ ಕಣ್ಣೀರು ಒರೆಸುವ ಪವಿತ್ರ ಕಾರ್ಯ. ಅಂಧಕಾರದಲ್ಲಿದ್ದ ಬಾಳಿಗೆ ಬೆಳಕು ನೀಡುವ ಈ ಕಾರ್ಯ ಸಮಾಜಕ್ಕೆ ಮಾದರಿ ಎಂದು ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ದೇವರ ತಿಮ್ಮಾಲಪುರ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘2060ನೇ ಮದ್ಯವರ್ಜನ ಶಿಬಿರ’ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.ಸಂಸಾರದಲ್ಲಿ ಸರಸ, ವಿರಸಗಳು ಬಂದು ಹೋಗುತ್ತವೆ. ಇವುಗಳ ನಡುವೆ ದಂಪತಿಗಳು ದುಶ್ಚಟಗಳಿಂದ ದೂರವಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಬಗ್ಗೆ ಸದಾ ಚಿಂತಿಸಬೇಕು. ಆಗ ಮಾತ್ರ ಸಂಸಾರದಲ್ಲಿ ಶಾಶ್ವತ ನೆಮ್ಮದಿ ದೊರಕುತ್ತದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷರಾದ ನಂಜನಗೌಡ್ರು ಮಾತನಾಡಿ, “ತಂದೆ-ತಾಯಿಯನ್ನು ಪ್ರೀತಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಗೌರವದಿಂದ ಬದುಕಿ” ಎಂದು ಕಿವಿಮಾತು ಹೇಳಿದರು. ಅಖಿಲ ಕರ್ನಾಟಕ ಜನಜಾಗೃತಿ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಮಿ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ ಅವರು ಉತ್ತಮ ವ್ಯಕ್ತಿತ್ವ ನಿರ್ಮಾಣದ ಬಗ್ಗೆ ಮಾರ್ಗದರ್ಶನ ನೀಡಿದರು. “ಆಗಲಿ ನಿಮಗಾಗಲಿ.. ಚಿರ ಸುಖ ಶಾಂತಿ ನಲಿದಾಡಲಿ…” ಎಂಬ ಭಾವಪೂರ್ಣ ಹಾಡುಗಳೊಂದಿಗೆ, ಕುಡಿತ ಬಿಟ್ಟವರ ಹೊಸ ಬದುಕು ಪ್ರಜ್ವಲಿಸಲಿ ಎಂದು ಶುಭಕೋರಲಾಯಿತು.
8 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಪಾಲ್ಗೊಂಡಿದ್ದವರು, ಕುಡಿತವನ್ನು ಸಂಪೂರ್ಣವಾಗಿ ಬಿಟ್ಟು, ಹೊಸ ಬಟ್ಟೆ ಧರಿಸಿ ಮದುಮಕ್ಕಳಂತೆ ಕಂಗೊಳಿಸುತ್ತಿದ್ದರು. ಇವರನ್ನು ನೋಡಿ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.ಶಿಬಿರದ ಸಂಸ್ಥಾಪಕ ಸಮಿತಿಯ ಅಧ್ಯಕ್ಷ ಸಾಸ್ವಿಹಳ್ಳಿ ಎಂ.ಪಿ. ಹಾಲೇಶ್, ಉಪಾಧ್ಯಕ್ಷ ಗುಂಡಗತ್ತಿ ಮಂಜುನಾಥ್, ಹುಲಿಕಟ್ಟಿ ಚಂದ್ರಪ್ಪ, ಓಂಕಾರಗೌಡ್ರು, ಯೋಗ ಶಿಕ್ಷಕಿ ಕುಸುಮ ಜಗದೀಶ್, ಯೋಜಾಧಿಕಾರಿ ಗಣಪತಿ ಭಟ್ ಸೇರಿದಂತೆ ಅನೇಕ ಪ್ರಮುಖರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.
Leave a comment