ಕಲಬುರಗಿ: ಕೊಟನೂರಿನ ಸೇಂಟ್ ಮೇರಿಸ್ ಶಾಲೆಯಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಕಡಗಂಚಿ, ಅಲ್ ಬದರ್ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ, ಕಲಬುರಗಿ ಹಾಗೂ ಸೇಂಟ್ ಮೇರಿಸ್ ಶಾಲೆಯ ಸಹಯೋಗದಲ್ಲಿ ಇಂದು ಉಚಿತ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರವನ್ನು ಶಾಲೆಯ ವ್ಯವಸ್ಥಾಪಕರಾದ ಫಾ. ಸ್ಟೀವನ್ ಅವರು ದಂತ ವೈದ್ಯಕೀಯ ತಂಡದೊಂದಿಗೆ ಸಸಿಗೆ ನೀರು ಹಾಕಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಲ್ ಬದರ್ ದಂತ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಹಲ್ಲುಗಳ ಸ್ವಚ್ಛತೆ, ಹಲ್ಲುಗಳನ್ನು ಸರಿಯಾಗಿ ಸಂರಕ್ಷಿಸುವ ವಿಧಾನ ಹಾಗೂ ಬಾಯಿಯ ಆರೋಗ್ಯದ ಮಹತ್ವದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ನಮ್ಮ ಹಲ್ಲುಗಳು ದೇವರು ಕೊಟ್ಟ ಅಮೂಲ್ಯವಾದ ಕೊಡುಗೆಗಳು.
ಅವು ನಮಗೆ ಆಹಾರವನ್ನು ಅಗಿಯಲು, ಮಾತನಾಡಲು ಮತ್ತು ಸುಂದರವಾಗಿ ನಗಲು ಸಹಾಯ ಮಾಡುತ್ತವೆ. ಆದ್ದರಿಂದ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ: ದಿನಕ್ಕೆ ಎರಡು ಬಾರಿ ಹಲ್ಲುಜ್ಜಿರಿ — ಬೆಳಿಗ್ಗೆ ಮತ್ತು ರಾತ್ರಿ. ಚಾಕೊಲೇಟ್, ಸಿಹಿತಿಂಡಿ ಮತ್ತು ಸಕ್ಕರೆ ಪಾನೀಯಗಳನ್ನು ಅತಿಯಾಗಿ ಸೇವಿಸಬೇಡಿ. ಊಟದ ನಂತರ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿರಿ. ಹಲ್ಲುಗಳಿಂದ ಗಟ್ಟಿಯಾದ ವಸ್ತುಗಳನ್ನು ತೆರೆಯಲು ಪ್ರಯತ್ನಿಸಬೇಡಿ.
ಹಲ್ಲಿನಲ್ಲಿ ನೋವು ಅಥವಾ ಸಮಸ್ಯೆ ಕಂಡುಬಂದರೆ ತಕ್ಷಣ ದಂತವೈದ್ಯರನ್ನು ಸಂಪರ್ಕಿಸಿರಿ. ಆರೋಗ್ಯಕರ ಹಲ್ಲುಗಳು ಸುಂದರ ನಗುವಿನ ಆಧಾರ. ನೀವು ಆರೋಗ್ಯವಾಗಿದ್ದರೆ ನಿಮ್ಮ ಓದು, ಆಟ ಮತ್ತು ಜೀವನವೂ ಸಂತೋಷದಿಂದ ಕೂಡಿರುತ್ತದೆ. ಎಂದು ಸಲಹೆ ನೀಡಿದರು. ಶಿಬಿರದಲ್ಲಿ ಒಟ್ಟು 731 ಜನರು ದಂತ ತಪಾಸಣೆಗೆ ಒಳಗಾದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಫಾ. ವಿಲಿಯಂ ಮಿರಾಂದ OCD, ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯ, ಡಾ. ಅಬ್ದುಲ್ಲಾ, ಸಯೀದಾ ಮದಿಹಾ, ಆಯಿಷಾ ನೂರೈನ್, ಅಝೀಲಾ, ಸನಾ, ಸಾನಿಯಾ, ಅಲ್ ಬದರ್ ದಂತ ಆಸ್ಪತ್ರೆಯ ವೈದ್ಯಕೀಯ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
Leave a comment