ಹರಪನಹಳ್ಳಿ : ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಾಗದೆ, ಹಬ್ಬದ ಸಂಭ್ರಮ ಮನೆಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲ್ಲೂಕಿನ ಮಾದಿಹಳ್ಳಿ ಗ್ರಾಮದಲ್ಲಿ ಉಚ್ಚಂಗಿದುರ್ಗ ವಲಯಮಟ್ಟದ ಪ್ರಾಥಮಿಕ ಶಾಲಾಹಂತದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಗಣೇಶ ಹಬ್ಬ,ಜಾತ್ರೆಗಳನ್ನು ಸಂಭ್ರಮಿಸುವಂತೆ ಕ್ರೀಡೆಗಳಲ್ಲಿಯೂ ಜಾತ್ಯಾತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು.ವಿದ್ಯಾರ್ಥಿಗಳು ಆಸಕ್ತಿದಾಯಕ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಕೀರ್ತಿತರಬೇಕು.ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಪೂರಕವಾಗಲಿವೆ.ತೀರ್ಪುಗಾರರು ಪಾರದರ್ಶಕವಾಗಿ ತೀರ್ಪುನೀಡುವ ಮೂಲಕ ನೈಜ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ನಾನು 2023ರ ಚುನಾವಣೆಯ ಕ್ರೀಡೆಯಲ್ಲಿ ಗೆದ್ದಿರುವೆ:2023 ರಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾವಣೆ ಎಂಬ ಬೃಹತ್ ಮಟ್ಟದ ಕ್ರೀಡೆಯಲ್ಲಿ ಗೆಲುವು ಸಾಧಿಸಿ ಶಾಸಕನಾಗಿ ಆಯ್ಕೆಯಾಗಿರುವೆ.ನನ್ನ ಆಡಳಿತಾವಧಿಯಲ್ಲಿ ಕ್ಷೇತ್ರದಲ್ಲಿ ಶಿಕ್ಷಣ,ಆರೋಗ್ಯ,ಮೂಲಸೌಕರ್ಯ ಸೇರಿದಂತೆ ಸಮಗ್ರ ಅಭಿವೃದ್ದಿಗೆ ಆದ್ಯತೆ ನೀಡುವೆ ಎಂದು ಭರವಸೆ ನೀಡಿದರು.
ತಲೆತಗ್ಗಿಸಿ ಪುಸ್ತಕ ಓದಿದರೆ ತಲೆ ಎತ್ತುವಂತೆ ಮಾಡುತ್ತದೆ:ವಿದ್ಯಾರ್ಥಿ ದಿಸೆಯಿಂದಲೇ ನಿರಂತರ ಅಭ್ಯಾಸಕ್ಕೆ ಒತ್ತುಕೊಡಬೇಕು.ಪುಸ್ತಕವನ್ನು ತಲೆ ತಗ್ಗಿಸಿ ಓದಿದರೆ ತಲೆ ಎತ್ತುವಂತೆ ಮಾಡುತ್ತದೆ.ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು.ಇಂದಿನ ಪ್ರಜೆಗಳೇ ಭವಿಷ್ಯ ಭಾರತದ ನಿರ್ಮಾತೃಗಳು.ಗಾಂಧಿ,ನೆಹರು,ಅವರಂತೆ ಯಾರಾಗುವರೋ ಎಂಬುದನ್ನು ‘ಗುಟ್ಟೊಂದ ಹೇಳುವೆ,ಪುಟಾಣಿ ಮಕ್ಕಳೇ ‘ಹಾಡಿನ ಮೂಲಕ ಮನರಂಜಿಸಿ ಕಿವಿಮಾತು ಹೇಳಿದರು.
ಕ್ರೀಡಾಕೂಟಗಳಿಗೆ ರಾಜ್ಯವ್ಯಾಪಿ ಅನುದಾನ ನೀಡುತ್ತಿಲ್ಲ ಆಯೋಜಕ ಶಿಕ್ಷಕರು ದೇಣಿಗೆ ಸಂಗ್ರಹಿಸಿ ಕ್ರೀಡೆಗಳ ಖರ್ಚುವೆಚ್ಚ ನಿರ್ವಹಿಸುವುದು ಕಷ್ಟಕರವಾಗಿದ್ದು ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಹಿರಿಯ ಮುಖಂಡ ಕೆ.ಚಂದ್ರಪ್ಪ ಮಾತನಾಡಿ,ಶಾಲಾಹಂತದಲ್ಲಿ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತುನೀಡಬೇಕು.ಕ್ರೀಡೆ,ಸಾಂಸ್ಕೃತಿಕ,ಸಂಗೀತ ಕ್ಷೇತ್ರಗಳಲ್ಲಿ ಸಾಧನೆಗೈದು ಶಾಲೆ,ಪೋಷಕರಿಗೆ ಕೀರ್ತಿ ತರಬೇಕು ಎಂದರು.
ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದ ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ‘ ಕ್ರೀಡೆಯಲ್ಲಿ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯಬೇಕು. ಹಸ್ತಕ್ಷೇಪ ತೋರದೆ ಪ್ರತಿಭಾನ್ವಿತರ ಆಯ್ಕೆಮಾಡಿ ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು.ಸರ್ಕಾರಿ ಶಾಲಾ ಕಾರ್ಯಕ್ರಮ ಯಶಸ್ಸಿನಲ್ಲಿ ಸ್ಥಳೀಯರ ಪ್ರೋತ್ಸಾಹ ಅತ್ಯಗತ್ಯ. ಕ್ರೀಡಾಕೂಟ ಯಶಸ್ಸಿನಲ್ಲಿ ಮಾದಿಹಳ್ಳಿ ಗ್ರಾಮಸ್ಥರ ಸಹಕಾರ ಸ್ಮರಿಸಿದರು.
ಇದೇ ವೇಳೆ ಶಾಸಕ ಬಿ.ದೇವೇಂದ್ರಪ್ಪ ಅವರು ಕ್ರೀಡಾಕೂಟಕ್ಕೆ ವೈಯಕ್ತಿಕವಾಗಿ 50 000 ರೂಪಾಯಿ ದೇಣಿಗೆ ನೀಡಿದರು. ವಲಯ ಮಟ್ಟದ ಕೀಡಾಕೂಟದಲ್ಲಿ 14 ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿವಕುಮಾರ್, ಬಡ್ತಿ ಮುಖ್ಯಗುರುಗಳು ಎನ್ ನಾಗರಾಜ, ಶಿಕ್ಷಕ ಬಿ.ಮಂಜುನಾಥ್, ಸಂಚಾಲಕ ಕೆ. ಶಿವಕುಮಾರ್, ಸಬ್ ಇನ್ಸ್ಪೆಕ್ಟರ್ ವಿಜಯ ಕೃಷ್ಣ, ವೈದ್ಯಾಧಿಕಾರಿ ರಾಘವೇಂದ್ರ,ನಿವೃತ್ತ ಶಿಕ್ಷಕರಾದ ಸಿದ್ಧಲಿಂಗನಗೌಡ, ಯು.ರೇವಣಸಿದ್ದಪ್ಪ, ಲೋಕಪ್ಪ,ಮುಖಂಡರಾದ ಬೊಮ್ಮಲಿಂಗಪ್ಪ,ಮೇಘರಾಜ್, ಬಸವನಗೌಡ,ಸುರೇಶ್,ಎಂ.ಕೆ.ಮಹಾದೇವಪ್ಪ,ವಕೀಲ ಗೋಣಿಶ್, ಶಿವಣ್ಣ ಟಿ.ಅಂಜಿನಪ್ಪ, ಪತ್ರಕರ್ತ ಮಾದಿಹಳ್ಳಿ ಮಂಜುನಾಥ್,ನಿವೃತ್ತ ಸಮಾಜಕಲ್ಯಾಣ ಅಧಿಕಾರಿ ಮಹೇಶ್ವರಪ್ಪ ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಭಾಗಿಯಾಗಿದ್ದರು.
Leave a comment