ಹರಪನಹಳ್ಳಿ : ತಾನು ಕೆಲಸ ಮಾಡುತ್ತಿದ್ದ ಶಿಕ್ಷಕಿಯರ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪದ ಮೇಲೆ ಮನೆಗೆಲಸ ಮಾಡುತ್ತಿದ್ದ ಮಹಿಳೆ ಸೇರಿ ಇಬ್ಬರನ್ನು ಹರಪನಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕಾಯಕದಹಳ್ಳಿ ಗ್ರಾಮದ ಮಣಿಗೇರ ಸಂಗೀತಾ (35) ಹಾಗೂ ಜಿ.ವೆಂಕಟೇಶ (30) ಬಂಧಿತರು. ಅವರ ಬಳಿಯಿದ್ದ ರೂ. 18.60 ಲಕ್ಷ ಮೌಲ್ಯದ ಬಂಗಾರದ ಆಭರಣ, ಮತ್ತೊಬ್ಬ ಶಿಕ್ಷಕಿ ಮನೆಯಲ್ಲಿ ಕಳ್ಳತನ ಮಾಡಿದ್ದ ರೂ. 3 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣ, ಪ್ರಕರಣಕ್ಕೆ ಬಳಸಿದ್ದ ಆಟೊ ಸೇರಿ ಒಟ್ಟು ರೂ. 22.60 ಲಕ್ಷ ಮೌಲ್ಯದ ವಸ್ತುಗಳನ್ನು ಜಫ್ತಿ ಮಾಡಲಾಗಿದೆ.

ಬಾಣಗೇರಿಯಲ್ಲಿ ಶಿಕ್ಷಕಿ ಬಿ.ಶಹಾನಾಜ್ ಬೇಗಂ ಅವರು ಡಿ.30ರಂದು ಬೆಳಿಗ್ಗೆ ಕೆಲಸಕ್ಕೆಂದು ಶಾಲೆಗೆ ತೆರಳಿದ್ದಾಗ ಮನೆಗೆ ನುಗ್ಗಿದ ಆರೋಪಿಗಳು ಕದ್ದು ಪರಾರಿಯಾಗಿದ್ದರು. ಅ.21ರಂದು ಜೋಯಿಸರಕೇರಿ ಮತ್ತೊರ್ವ ಶಿಕ್ಷಕಿ ಎಚ್.ವೀರಮ್ಮ ಅವರ ಮನೆಯಲ್ಲಿ ರೂ. 3 ಲಕ್ಷ ಮೌಲ್ಯದ ಕಳ್ಳತನ ಆಗಿತ್ತು.
ಮಾಲೀಕರ ಹೇಳಿಕೆ ಆಧರಿಸಿ ಮನೆಗೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಪೊಲೀಸರು, ಪ್ರಕರಣದ ಬೆನ್ನತ್ತಿ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿದ್ದ ಡಿವೈಎಸ್ಪಿ ಸಂತೋಷ ಚೌವ್ಹಾಣ್, ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂಗ ಹಿರೇಮಠ, ಬಿ,.ಮೀನಾಕ್ಷಿ, ಸಿಬ್ಬಂದಿ ಆನಂದ, ರವಿ ದಾದಾಪುರ, ಮಾಲತೇಶ ಬಿಳಿಚೋಡು, ಯು.ನಾಗರಾಜ್, ವಾಸುದೇವ ನಾಯ್ಕ, ಸಿದ್ದಿ ಮುಬಾರಕ್, ಯರ್ರಿಸ್ವಾಮಿ, ವಸಂತಕುಮಾರ, ನಾರನಗೌಡ, ಜಗದೀಶ, ಮಾಬು ಸಾಹೇಬ, ಗುರುಪ್ರಸಾದ್. ಇಮಾಮ್ ಸಾಹೇಬ್ , ಸಿಡಿಆರ್ ವಿಭಾಗದ ಕುಮಾರನಾಯ್ಕ, ಜೀಪ್ ಚಾಲಕ ಇಮಾಮ್ ಸಾಹೇಬ್, ನಾಗರಾಜ್ ನಾಯ್ಕ ಅವರುಗಳ ಕಾರ್ಯಕ್ಕೆ ಎಸ್ಪಿ ಜಾಹ್ನವಿ ಎಸ್, ಹೆಚ್ಚುವರಿ ಎಸ್ಪಿ ಜಿ.ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Leave a comment