
ಹರಪನಹಳ್ಳಿ : ನ್ಯಾಯಾಲಯ ಆದೇಶ ದಿಕ್ಕರಿಸಿ ಸರ್ವೆ ನಂಬರ್ 539/ಬಿ1ಬಿ ವಿಸ್ತೀರ್ಣದಲ್ಲಿ 1 ಎಕರೆ 42 ಸೆಂಟ್ಸ್ ಭೂಮಿಯನ್ನು ಅಧಿಕಾರಿಗಳು ತಮ್ಮ ವಶಕ್ಕೆ ಪಡೆಯಲು ಹೊರಟಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಸರ್ಕಾರದಿಂದ ಪಟ್ಟಾ ಪಡೆದಿರುವ ಬೇಲ್ದಾರ್ ಲಕ್ಷ್ಮಯ್ಯ ಅವರು 1 ಎಕರೆ 42 ಸೆಂಟ್ಸ್ ಭೂಮಿ ಮಾರಾಟ ಮಾಡಿದ್ದು, ಇದೇ ಜಾಗವನ್ನು ಇಜಂತಕರ್ ಜಯಪ್ರಕಾಶ್ ಅವರು ಬೇರೆಯವರಿಗೆ ಮಾರಾಟ ಮಾಡಿದ್ದು, ಈಗ ಅಮಿನಾ ಮೊಹಮ್ಮದಿ ಅವರ ಹೆಸರಿನಲ್ಲಿದೆ. ಇದರ ಡೋರ್ ನಂಬರ್ 399/1817/ಎ26/ಎ ಪುರಸಭೆ ಕೊಟ್ಟಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ತಡೆಯಾಜ್ಞೆ ಆದೇಶವಿದ್ದರೂ ಸಹ ಅಧಿಕಾರಿಗಳು ಯಾವುದೇ ನೊಟೀಸ್ ಜಾರಿಮಾಡದೇ ದೌರ್ಜನ್ಯದಿಂದ ಕಬಳಿಸುತ್ತಿದ್ದಾರೆ.
ಜನಗಳು ವಾಸವಿರುವ ಜಾಗದಲ್ಲಿ ಬಸ್ ನಿಲ್ದಾಣ ಕಟ್ಟಿಸಬಾರದು. ವಾಸವಿರುವ ಜನಗಳನ್ನು ಒಕ್ಕಲೆಬ್ಬಿಸಬಾರದು. ಶಾಸಕರು ಮತ್ತು ಅಧಿಕಾರಿಗಳು ಪಟ್ಟಣಕ್ಕೆ ಹೊಂದಿಕೊಂಡಿರುವ ಜಾಗ ಖರೀದಿಸಿ ನೂತನ ಸರ್ಕಾರಿ ಬಸ್ ನಿಲ್ದಾಣ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾವುದು ಎಂದು ಅಂಜುಮನ್ ಸಮಿತಿ ಮಾಜಿ ಅಧ್ಯಕ್ಷ ಡಿ.ಮುಜಿಬರ್ ರೆಹಮಾನ್ , ಪುರಸಭೆ ಮಾಜಿ ಸದಸ್ಯ ಡಿ.ಜಹೂರು, ಇಜಂತಕರ್ ರಾಜು, ಕಲೀಮುಲ್ಲಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹರಪನಹಳ್ಳಿ ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಮಾತನಾಡಿ, ‘ಕೋಟೆ ಕಾಳಮ್ಮ ದೇವಸ್ಥಾನದ ಬಳಿಯಿರುವ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಆ ಪ್ರದೇಶವನ್ನು ಯಾವುದೇ ಸಮಾಜಕ್ಕೆ ಕೊಟ್ಟಿಲ್ಲ. ಆ ಜಾಗವನ್ನು ಉಯೋಗಿಸಿಲ್ಲದ ಕಾರಣ, ಈಗ ಬೇರೊಂದು ಸಾರ್ವಜನಿಕ ಉದ್ದೇಶಕ್ಕೆ ಆ ಸ್ಥಳವನ್ನು ಕಾಯ್ದಿರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
Leave a comment