ಕೊಟ್ಟೂರು : ‘ಮನೆ ಪಾಯ ತೆಗೆಯುವಾಗ 1 ಕೆಜಿ ಬಂಗಾರ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುತ್ತೇವೆ’ ಎಂದು ನಂಬಿಸಿ ಚೆನ್ನೈ ಮೂಲದ ಕಾಂಟ್ರಾಕ್ಟರ್ಗೆ ಬರೋಬ್ಬರಿ 30 ಲಕ್ಷ ರೂ. ವಂಚಿಸಿದ್ದ ಇಬ್ಬರು ನಕಲಿ ಚಿನ್ನದ ಮಾರಾಟಗಾರರನ್ನು ಹೊಸಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 29.50 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?
ಕಳೆದ ಜನವರಿ 28, 2026 ರಂದು ವಿಜಯನಗರ ಜಿಲ್ಲೆಯ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಯಾಸನಕೆರೆ ಗ್ರಾಮದ ಬಳಿ (NH-50 ರಸ್ತೆ) ಇಬ್ಬರು ಅಪರಿಚಿತರು ಚೆನ್ನೈ ಮೂಲದ ಗುತ್ತಿಗೆದಾರ ಜಿ. ಕುಮಾರ್ (49) ಎಂಬುವವರನ್ನು ಸಂಪರ್ಕಿಸಿದ್ದರು. ‘ನಮಗೆ ಮನೆ ಕಟ್ಟಲು ಪಾಯ ತೆಗೆಯುವಾಗ 1 ಕೆಜಿಗೂ ಹೆಚ್ಚು ಬಂಗಾರದ ಆಭರಣಗಳು ಸಿಕ್ಕಿವೆ, ಅದನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಗೆ ನಿಮಗೆ ಕೊಡುತ್ತೇವೆ’ ಎಂದು ಬಲೆ ಬೀಸಿದ್ದರು.
ಇದನ್ನು ನಂಬಿದ ಕುಮಾರ್ ಅವರು ಹಣದೊಂದಿಗೆ ಬಂದಾಗ, ಆರೋಪಿಗಳು ಅವರನ್ನು ಕ್ಯಾಸನಕೆರೆ ಗ್ರಾಮದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬೆದರಿಸಿ ಅವರ ಬಳಿಯಿದ್ದ ಸುಮಾರು 30 ಲಕ್ಷ ರೂಪಾಯಿ ನಗದನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ವಂಚನೆಗೊಳಗಾದ ಕುಮಾರ್ ಅವರು ಮಾರ್ಚ್ 14 ರಂದು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಖದೀಮರ ಬೆನ್ನತ್ತಿದ ಪೊಲೀಸರಿಗೆ ಭರ್ಜರಿ ಬೇಟೆ!
ಈ ಭಾರಿ ಮೊತ್ತದ ಸುಲಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಾಹ್ನವಿ ಎಸ್ ಮತ್ತು ಹೆಚ್ಚುವರಿ ಎಸ್.ಪಿ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಕೂಡ್ಲಿಗಿ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ನೇತೃತ್ವದಲ್ಲಿ, ಸಿಪಿಐ ಡಿ. ದುರುಗಪ್ಪ, ಪಿಎಸ್ಐ ಸಿದ್ರಾಮ ಬಿದರಾಣಿ ಹಾಗೂ ಸಿಬ್ಬಂದಿಗಳಾದ ಅಂಜನಮೂರ್ತಿ, ಎನ್.ಎಂ.ಸ್ವಾಮಿ, ಕೊಟ್ರೇಶ್, ಮಂಜುನಾಥ, ವಿಜಯಕುಮಾರ, ಸುರೇಶ್, ಸಿದ್ದಲಿಂಗಪ್ಪ, ಸಂದೀಪ, ಬಿಳಿಚೋಡು ಮಾಲತೇಶ, ಕೃಷ್ಣನಾಯ್ಕ, ರವಿಚಂದ್ರ, ಕುಮಾರನಾಯ್ಕ ಅವರನ್ನು ಒಳಗೊಂಡ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಖತರ್ನಾಕ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದೆ.
ಬಂಧಿತ ಆರೋಪಿಗಳ ವಿವರ:
* ಸುರೇಶ್ ಅಲಿಯಾಸ್ ರಮೇಶ್ (32 ವರ್ಷ), ಲಿಂಗನಹಳ್ಳಿ ಕೊರಚರಹಟ್ಟಿ, ಕೂಡ್ಲಿಗಿ ತಾಲ್ಲೂಕು.
* ಸೋಮಣ್ಣ (40 ವರ್ಷ), ಲಿಂಗನಹಳ್ಳಿ ಕೊರಚರಹಟ್ಟಿ, ಕೂಡ್ಲಿಗಿ ತಾಲ್ಲೂಕು.
ಸದ್ಯ ಇಬ್ಬರೂ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ₹ 29,50,000 ರೂ. ನಗದನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡದ ಕಾರ್ಯವನ್ನು ಎಸ್.ಪಿ ಜಾಹ್ನವಿ ಎಸ್ ಅವರು ಶ್ಲಾಘಿಸಿದ್ದಾರೆ.
Leave a comment