ಹರಪನಹಳ್ಳಿ: “ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ” ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಎನ್.ಜಿ.ಮನೋಹರ್
ತಾಲ್ಲೂಕಿನ ಅರಸೀಕೆರೆ ಗ್ರಾಮದ ಶಾಂತಪ್ರಕಾಶ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ (2025-26ನೇ ಸಾಲಿನ) ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲಾ ಶಿಕ್ಷಕರು ಮಕ್ಕಳನ್ನು ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯುತ್ತಮವಾಗಿ ರೂಪಿಸುತ್ತಿದ್ದಾರೆ. ಬಡತನದಿಂದ ಬಂದು ರಾಷ್ಟ್ರಪತಿಯಾದ ಎಪಿಜೆ ಅಬ್ದುಲ್ ಕಲಾಂ ಅವರಂತೆ ಈ ಗ್ರಾಮೀಣ ಮಕ್ಕಳು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಾಟೀಲ್ ಆಗ್ರೋ ಏಜೆನ್ಸಿ ಮಾಲೀಕ ಪ್ರಶಾಂತ್ ಪಾಟೀಲ್ ಮಾತನಾಡಿ, “ಶಾಂತ ಪ್ರಕಾಶ ನಗರ ಶಾಲೆ ಶೈಕ್ಷಣಿಕ ಪ್ರಗತಿಯಲ್ಲಿ ತಾಲೂಕಿಗೆ 2ನೇ ಸ್ಥಾನದಲ್ಲಿದೆ. ಇದೀಗ ಆಂಗ್ಲ ಮಾಧ್ಯಮವೂ ಆರಂಭವಾಗಿದ್ದು, ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ಮುಂದಿದ್ದಾರೆ” ಎಂದರು.
ಸಾವಿತ್ರಿ ಬಾಯಿಫುಲೆ ಸಂಘದ ಜಿಲ್ಲಾಧ್ಯಕ್ಷೆ ಟಿ.ಹೆಚ್.ಎಂ.ಲತಾ ಮಾತನಾಡಿ, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಪೋಷಕರು ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿಗೆ ಮದುವೆ ಮಾಡದೆ, ಅವರಿಗೆ ಉನ್ನತ ಶಿಕ್ಷಣ ಕೊಡಿಸಿ ಆರ್ಥಿಕವಾಗಿ ಸದೃಢರನ್ನಾಗಿ ಮಾಡಬೇಕು” ಎಂದು ಕರೆನೀಡಿದರು. ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂದವು.
ವಕೀಲ ಡಾ. ಎಂ.ಸುರೇಶ್, ಪ್ರೌಢಶಾಲೆ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಗುರುಮೂರ್ತಿ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಂಗಯ್ಯ, ಮುಖ್ಯ ಗುರುಗಳಾದ ಹೆಚ್.ಅನುಸೂಯಮ್ಮ, ಮುಖಂಡರಾದ ಕೆ.ಲಕ್ಷ್ಮೀ ಮಹಾಂತೇಶ್, ಐ.ಸಲಾಂ ಸಾಹೇಬ್, ಪಿ.ಹಾಲೇಶ್, ಅಡ್ಡಿ ಕೆಂಪಣ್ಣ, ಸಹ ಶಿಕ್ಷಕರಾದ ಪಿ.ಬಸವರಾಜ್, ಟಿ. ಮಮ್ತಾಜ್ ಬೇಗಂ, ಸರಸ್ವತಿ, ಟಿ.ಹೆಚ್.ಎಂ. ಉಮಾ, ಯು. ಸತೀಶ್, ಬಿ.ಸತೀಶ್, ಸುನೀತ, ಪವಿತ್ರ, ಚಾಂದಿನಿ, ಭರತ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಟಿ. ರಮೇಶ್, ಉಪಾಧ್ಯಕ್ಷೆ ಎಂ.ಗೌರಮ್ಮ, ಸರ್ವ ಸದಸ್ಯರು, ಪೋಷಕರಿದ್ದರು.
Leave a comment