ಹುಬ್ಬಳ್ಳಿ: ಕರ್ನಾಟಕದ ಸಾಮಾಜಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಶೋಷಿತ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡಿರುವ ‘ಅಹಿಂದ’ (ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು) ಚಳುವಳಿಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ , ನಗರದಲ್ಲಿ ಬೃಹತ್ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಏಪ್ರಿಲ್ 26ರಂದು ಬೆಳಿಗ್ಗೆ 10 ಗಂಟೆಗೆ ವಿಮಾನ ನಿಲ್ದಾಣ ರಸ್ತೆಯ ರಾಯಲ್ ರೀಟೆಜ್ ಹೋಟೆಲ್ನಲ್ಲಿ ‘ಅಹಿಂದ 25: ಹೋರಾಟ-ಸಾಧನೆ-ಸಂಕಲ್ಪ’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮ ಜರುಗಲಿದೆ.
ಶತಮಾನಗಳ ಕಾಲ ನಡೆದ ಜಾತಿ, ವರ್ಗ ಮತ್ತು ಲಿಂಗ ತಾರತಮ್ಯದ ವಿರುದ್ಧದ ಹೋರಾಟಗಳೇ ಅಹಿಂದ ಪರಿಕಲ್ಪನೆಗೆ ಐತಿಹಾಸಿಕ ಅಡಿಪಾಯವಾಗಿವೆ. ಗೌತಮ ಬುದ್ಧ, ಬಸವಣ್ಣ, ಅಂಬೇಡ್ಕರ್, ಜ್ಯೋತಿರಾವ್ ಫುಲೆ, ಪೆರಿಯಾರ್ ಹಾಗೂ ನಾರಾಯಣ ಗುರುಗಳಂತಹ ಮಹಾನ್ ಚಿಂತಕರ ತತ್ವಗಳು ಈ ಚಳುವಳಿಯ ಆಧಾರಸ್ತಂಭಗಳಾಗಿವೆ. ಮಂಟೇಸ್ವಾಮಿ, ಕನಕದಾಸ, ಶಿಶುನಾಳ ಶರೀಫ್ ಹಾಗೂ ಸೇವಾಲಾಲ್ ಅವರಂತಹ ಸಾಂಸ್ಕೃತಿಕ ನಾಯಕರು ಈ ಪ್ರತಿರೋಧದ ಪರಂಪರೆಯನ್ನು ಬಲಪಡಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
1970ರ ದಶಕದಲ್ಲಿ ಡಿ. ದೇವರಾಜ್ ಅರಸ್ ಅವರು ಜಾರಿಗೆ ತಂದ ಭೂ ಸುಧಾರಣೆಗಳು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣ ನೀತಿಗಳು ಈ ಸಂಘಟನೆಗೆ ಮೊದಲ ಹಂತದ ಬಲ ನೀಡಿದವು. 1998ರ ಕೋಲಾರ ಸಮಾವೇಶದಲ್ಲಿ ‘ಅಹಿಂದ’ ಪರಿಕಲ್ಪನೆಗೆ ಮೊದಲ ಬಾರಿಗೆ ಸ್ಪಷ್ಟ ರೂಪ ಲಭಿಸಿತು. 2000ರ ದಶಕದಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶವು ಈ ಸಾಮಾಜಿಕ ಚಳುವಳಿಯನ್ನು ಪ್ರಬಲ ರಾಜಕೀಯ ಶಕ್ತಿಯಾಗಿ ಪರಿವರ್ತಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪರಿಕಲ್ಪನೆಯನ್ನು ಜನಮಟ್ಟಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅವರ ಆಡಳಿತದ ಅನ್ನಭಾಗ್ಯ, ಕ್ಷೀರಭಾಗ್ಯದಂತಹ ಯೋಜನೆಗಳು ಈ ಸಿದ್ಧಾಂತದ ಪ್ರಾಯೋಗಿಕ ರೂಪಗಳಾಗಿವೆ.
ಅಹಿಂದ ಚಳುವಳಿಯು ಕೇವಲ ಹಿಂದಿನ ಸಾಧನೆಗಳ ಸ್ಮರಣೆಯಾಗಿ ಉಳಿಯಬಾರದು. ಮುಂಬರುವ ದಿನಗಳಲ್ಲಿ ಜಾತಿ ಆಧಾರಿತ ಜನಗಣತಿ, ಒಳಮೀಸಲಾತಿ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ಉಚಿತ ಶಿಕ್ಷಣ ಮತ್ತು ಭೂ ಹಂಚಿಕೆಯಂತಹ ಗುರಿಗಳನ್ನು ತಲುಪಲು ಹೋರಾಟ ಮುಂದುವರಿಸುವ ಅಗತ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಪ್ರಗತಿಪರ ಚಿಂತಕರು, ವಿದ್ವಾಂಸರು ಹಾಗೂ ಅಹಿಂದ ಸಮುದಾಯದ ಮುಖಂಡರು ಈ ಸಮಾವೇಶದಲ್ಲಿ ಪಾಲ್ಗೊಂಡು ಚಳುವಳಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿದ್ದಾರೆ.
Leave a comment