ಹರಪನಹಳ್ಳಿ: ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ವಿಶೇಷ ಹರಕೆಯಾದ ‘ಮುಳ್ಳಿನ ಪವಾಡ’ ಕಾರ್ಯಕ್ರಮಗಳು ಮಾರ್ಚ್ 18ರಿಂದ 20ರವರೆಗೆ ವಿಜೃಂಭಣೆಯಿಂದ ಜರುಗಲಿವೆ.
ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ (ಮಾ. 18) ಸಂಜೆ 7 ಗಂಟೆಗೆ ರಥಕ್ಕೆ ಕಳಸಾರೋಹಣ ನೆರವೇರಲಿದೆ. ಬಳಿಕ ಮುಳ್ಳಿನ ಪವಾಡ ನಡೆಸಿಕೊಡುವ ಆರ್. ಜಗದೀಶ್ ಗೌಡ ಅವರಿಗೆ ಕಂಕಣ ಕಟ್ಟುವ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.
ಸಡಗರದ ರಥೋತ್ಸವ: ಮಾ. 19ರ ಗುರುವಾರ ಬೆಳಗಿನ ಜಾವ 4 ಗಂಟೆಗೆ ಶ್ರೀ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ ಪೂಜೆ ನೆರವೇರಲಿದೆ. ಪರಾಭವ ಸಂವತ್ಸರದ ರೇವತಿ ನಕ್ಷತ್ರದ ಯುಗಾದಿ ಪಾಡ್ಯದ ಶುಭ ದಿನದಂದು ಸಂಜೆ 5.30ಕ್ಕೆ ದೇವಸ್ಥಾನದ ಆವರಣದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಇಡೀ ಗ್ರಾಮ ಹಾಗೂ ದೇವಸ್ಥಾನವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿದೆ.
ರೋಚಕ ಮುಳ್ಳಿನ ಪವಾಡ: ಮಾ. 20ರ ಶುಕ್ರವಾರ ಸಂಜೆ 5.30ಕ್ಕೆ ಜಾತ್ರೆಯ ಪ್ರಮುಖ ಆಕರ್ಷಣೆಯಾದ ‘ಮುಳ್ಳಿನ ಪವಾಡ’ ನಡೆಯಲಿದೆ. ಈ ಪವಾಡ ನಡೆಸುವ ಜಗದೀಶ್ ಗೌಡ ಅವರು ಮೂರು ದಿನಗಳ ಕಾಲ ಕಠಿಣ ವ್ರತ ಆಚರಿಸಲಿದ್ದಾರೆ. ಹರಿತವಾದ ಕಾರಿ ಮುಳ್ಳಿನಿಂದ ಸಿದ್ಧಪಡಿಸಿದ ಪಲ್ಲಕ್ಕಿಯ ಮೇಲೆ ಮಲಗುವ ಇವರನ್ನು ಭಕ್ತರು ಹೊತ್ತು ದೇವಸ್ಥಾನ ಹಾಗೂ ಓಕುಳಿ ಗುಂಡಿಯ ಸುತ್ತ ಮೆರವಣಿಗೆ ಮಾಡಲಿದ್ದಾರೆ.
ಅಂದು ಬೆಳಿಗ್ಗೆ ಭೇಟಿ ಮರ ತರುವುದು ಹಾಗೂ ಓಕುಳಿ ಗುಂಡಿಗೆ ನೀರು ತುಂಬಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಮುಳ್ಳಿನ ಪವಾಡದ ಬಳಿಕ ಓಕುಳಿ ಆಟ, ಕಾಯಿ ಹರಿಯುವ ಸ್ಪರ್ಧೆ ಹಾಗೂ ಚಂದ್ರ ದರ್ಶನ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಯ ಸಂಪ್ರದಾಯದಂತೆ ಓಕುಳಿ ಗುಂಡಿಯಲ್ಲಿ ಮಕ್ಕಳು ಹಾಗೂ ಯುವಕರು ಹಾರಿ ಸಂಭ್ರಮಿಸಲಿದ್ದಾರೆ.
Leave a comment