ಹರಪನಹಳ್ಳಿ : ನಸುಕಿನ ಜಾವ, ಮೈ ನಡುಗುವ ಚಳಿ ಲೆಕ್ಕಿಸದ ಭಕ್ತರು ಕೆರೆಯಲ್ಲಿ ಮಿಂದೆದ್ದು ಒಂದುವರೆ ಕಿಲೋ ಮೀಟರ್ ದೂರ ದೀಡು ನಮಸ್ಕಾರ, ಸೂರ್ಯೋದಯಕ್ಕೆ ಸರಿಯಾಗಿ ದೇವಸ್ಥಾನ ತಲುಪಿದ ಮೆರವಣಿಗೆ, ದಲಿತ ಪೂಜಾರಿಗಳ ಪಾದಸ್ಪರ್ಶಿಸಿಕೊಂಡು ಸಾವಿರಾರು ಜನರ ಭಕ್ತಿ ಪರಾಕಾಷ್ಠೆ,,,
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಗ್ರಾಮದ ಇತಿಹಾಸ ಪ್ರಸಿದ್ಧ ದಂಡಿನ ದುರುಗಮ್ಮ ದೇವಿ ಜಾತ್ರೆಯಲ್ಲಿ ಭಾನುವಾರ ಬೆಳಗಿನ ಜಾವ ಕಂಡು ಬಂದ ದೃಶ್ಯಗಳಿವು. ಬೆಳಿಗ್ಗೆ 3.30 ಗಂಟೆಗೆ ದೇವಸ್ಥಾನದಿಂದ ಪಾದಗಟ್ಟೆಗೆ ದಲಿತ ಪೂಜಾರಿಗಳೊಂದಿಗೆ ಆಗಮಿಸಿದ ಗ್ರಾಮದ ದೈವಸ್ಥರು ಪಂಜಿನ ಬೆಳಕಿನಲ್ಲಿ ಧಾರ್ಮಿಕ ವಿದಿವಿಧಾನ ಸಲ್ಲಿಸಿದರು. ಎಲ್ಲ ಸಮುದಾಯದವರು ಪೂಜೆ ಸಲ್ಲಿಸಿ, ದುರ್ಗೆಯರು ಪಡ್ಲಗಿ ಹಿಡಿದು, ದಲಿತ ಪೂಜಾರಿ ಸಂತೋಷ್ ಕೇಲು ಹೊತ್ತು ಹೊರಡಲು ಸಜ್ಜಾದಾಗ 5 ಗಂಟೆ ಆಗಿತ್ತು. ಡೊಳ್ಳಿನ ನಿನಾದ ರುಮ್ಮಿಗಳ ಸದ್ದು, ಸಾವಿರಾರು ಭಕ್ತರ ಉದೋ,, ಉದೋ ದಂಡಿನ ದುರುಗಮ್ಮ ಉದ್ಘೋಷ ಮೊಳಗಿತು. ಚಾಮರ ಹಿಡಿದಿದ್ದ ಯುವಕರು, ಪಡ್ಲಗಿ ಹಿಡಿದಿದ್ದ ದುರ್ಗೆಯರು ಮುಂದೆ ಸಾಗುತ್ತಿದ್ದರೆ, ಕೇಲು ಹೊತ್ತಿದ್ದ ದಲಿತ ಪೂಜಾರಿ ಭಕ್ತರ ಬೆನ್ನ ಮೇಲೆ ರಾಜಗಾಂಭೀರ್ಯದಿಂದ ನಡೆಯುತ್ತಾ ಒಂದುವರೆ ಕಿ.ಮೀ. ದೂರದಲ್ಲಿದ್ದ ದೇವಸ್ಥಾನ ಪ್ರವೇಶಿಸಿದರು.
ದಾರಿಯುದ್ದಕ್ಕೂ ಭಕ್ತರು ಸಾಲಾಗಿ ಬೋರಲಾಗಿ ಮಲಗಿದ್ದರು. ದಲಿತ ಪೂಜಾರ ಸ್ಪರ್ಶ ಪಡೆದ ನಂತರ ಧನ್ಯತೆ ಬಾವ ವ್ಯಕ್ತಪಡಿಸಿದರು. ಮೆರವಣಿಗೆಯಲ್ಲಿ ಚಿತ್ರೀಕರಣ, ಪೊಟೊ ತೆಗೆಯಲು ನಿರ್ಬಂಧಿಸಲಾಗಿತ್ತು. ಮೊಬೈಲ್ ಹಿಡಿದು ನಿಂತಿದ್ದ ಯುವಕರಿಗೆ ಚಿತ್ರೀಕರಣ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದರು. ಆದರೂ ಕೆಲವರು ಅವರ ಕಣ್ಣುತಪ್ಪಿಸಿ ವಿಡಿಯೊ ಸೆರೆ ಹಿಡಿದು ವೈರಲ್ ಮಾಡಿದರು. ‘ನಾನು ಪ್ರತಿ ವರ್ಷ ಜಾತ್ರೆಗೆ ಆಗಮಿಸಿ ರಸ್ತೆಯಲ್ಲಿ ಮಲಗುತ್ತೇನೆ. ಇದರಿಂದ ನನಗೆ ಒಳಿತಾಗಿದೆ’ ಎಂದು ಭಕ್ತ ಬಸವರಾಜ್ ಅನಿಸಿಕೆ ವ್ಯಕ್ತಪಡಿಸಿದರು. ಸಾವಿರಾರು ಜನ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿ, ಹರಕೆ ಕಟ್ಟಿಕೊಂಡರು.
ಪುರಾತನ ಕಾಲದಿಂದಲೂ ನಡೆಯುತ್ತಾ ಬಂದಿರುವ ಈ ಹಬ್ಬವೂ ವಿಶೇಷವಾಗಿದೆ. ಪ್ರತಿ ವರ್ಷ ದೇವಸ್ಥಾನ ಸಮಿತಿ, ಗ್ರಾಮಸ್ಥರು ಸಾಮರಸ್ಯದಿಂದ ಹಬ್ಬ ಆಚರಿಸುತ್ತಾ ಬಂದಿದ್ದೇವೆ. ದಂಡಿನ ದುರುಗಮ್ಮ ದೇವಿ ಸಕಲರಿಗೂ ಒಳಿತು ಮಾಡಲಿ ಎಂದು ದಲಿತ ಮುಖಂಡ ಪೂಜಾರ ಮರಿಯಪ್ಪ ತಿಳಿಸಿದರು. ಡಿವೈಎಸ್ಪಿ ಸಂತೋಷ ಚವ್ಹಾಣ್, ಸಿಪಿಐ ಮಹಾಂತೇಶ ಸಜ್ಜನ್ ನೇತೃತ್ವದಲ್ಲಿ ಬಂದೋಬಸ್ತ್ ಒದಗಿಸಲಾಗಿತ್ತು. ಗ್ರಾಮದ ಮಾಜಿ ಸಂಸದ ವೈ.ದೇವೇಂದ್ರಪ್ಪ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ಅರಸೀಕೆರೆ ಎನ್.ಕೊಟ್ರೇಶ್, ಪ್ರಶಾಂತ್ ಪಾಟೀಲ್, ಪೂಜಾರ ಮರಿಯಪ್ಪ, ಪಿ.ದುರ್ಗೇಶ್, ಸಲಾಂ ಸಾಬ್, ಲಕ್ಷ್ಮಿದೇವಿ, ಸುಮಂಗಲಮ್ಮ, ಶಿವರುದ್ರಪ್ಪ, ಎನ್.ಸವಿತಾ, ಎ.ಎಚ್.ಪಂಪಣ್ಣ, ಎಚ್.ನಾಗರಾಜಪ್ಪ, ಪಿಡಿಒ ಮಾರುತೇಶ ಇದ್ದರು.
Leave a comment