ಹರಪನಹಳ್ಳಿ: ರೈತರು ಬೆಳೆಗಳನ್ನು ಬೆಳೆಯುವ ಮೊದಲು ಮಣ್ಣು ಹಾಗೂ ನೀರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡಿಸಬೇಕು. ಮಣ್ಣು ಫಲವತ್ತಾಗಿದ್ದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಹಡಗಲಿಯ ಕೃಷಿ ವಿಸ್ತರಣ ಶಿಕ್ಷಣ ಕೇಂದ್ರದ ಡಾ. ಮಂಜುನಾಥ್ ಬಾನುವಳ್ಳಿ ತಿಳಿಸಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ಕೃಷಿ ಕೇಂದ್ರದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಮಣ್ಣು ಆರೋಗ್ಯ ಅಭಿಯಾನ’ದಡಿ ರೈತರಿಗೆ ತರಬೇತಿ ಹಾಗೂ ರಾಗಿ ಬೆಳೆಯುವ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾವಯವ ಕೃಷಿಗೆ ಒತ್ತು ನೀಡಿ
“ಒಂದೇ ಬೆಳೆಯನ್ನು ಪದೇ ಪದೇ ಬೆಳೆಯುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ಆದ್ದರಿಂದ ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆಯಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ಮಣ್ಣಿನ ಗುಣಮಟ್ಟ ಹಾಳಾಗುವುದಲ್ಲದೆ ಅನೇಕ ರೋಗಗಳು ಹರಡುತ್ತವೆ. ಹೀಗಾಗಿ ರೈತರು ರಾಸಾಯನಿಕ ಗೊಬ್ಬರಕ್ಕೆ ಮಾರು ಹೋಗದೆ ಹೆಚ್ಚಾಗಿ ಕೊಟ್ಟಿಗೆ ಗೊಬ್ಬರ ಹಾಗೂ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು,” ಎಂದು ಅವರು ಸಲಹೆ ನೀಡಿದರು.
ಆರೋಗ್ಯಕ್ಕೆ ರಾಗಿ ಶ್ರೇಷ್ಠ: ವಿ.ಸಿ. ಉಮೇಶ್
ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮೇಶ್ ಮಾತನಾಡಿ, “ಅಕ್ಕಿಗಿಂತ ರಾಗಿ ಶ್ರೇಷ್ಠವಾದುದು. ರಾಗಿಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್ ಹಾಗೂ ನಾರಿನಂಶ ಹೆಚ್ಚಾಗಿರುವುದರಿಂದ ಬಿಪಿ ಮತ್ತು ಸಕ್ಕರೆ ಕಾಯಿಲೆ ಇರುವವರಿಗೆ ಇದು ಅತ್ಯುತ್ತಮ ಆಹಾರ. ಅರಸೀಕೆರೆ ಹೋಬಳಿಯಲ್ಲಿ ಅತಿ ಹೆಚ್ಚು ರೈತರು ರಾಗಿ ಬೆಳೆಯುತ್ತಿರುವುದು ಸಂತಸದ ವಿಷಯ. ಸರ್ಕಾರ ಕೂಡ ರಾಗಿಗೆ ಬೆಂಬಲ ಬೆಲೆ ಘೋಷಿಸಿದೆ,” ಎಂದರು.
ಅರಸೀಕೆರೆಯಲ್ಲಿ ರಾಗಿ ಖರೀದಿ ಕೇಂದ್ರಕ್ಕೆ ಆಗ್ರಹ
ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, “ಈ ಭಾಗದಲ್ಲಿ ರಾಗಿ ಬೆಳೆಗಾರರು ಹೆಚ್ಚಿರುವುದರಿಂದ ಅರಸೀಕೆರೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ತೆರೆಯಬೇಕು. ಮಕ್ಕಳಿಗೆ ರಾಗಿ ಮಾಲ್ಟ್ ನೀಡುತ್ತಿರುವುದು ಒಳ್ಳೆಯ ಕ್ರಮ. ರೈತರು ರಾಗಿಯನ್ನು ವೈಜ್ಞಾನಿಕ ಬೆಲೆಗೆ ಮಾರಾಟ ಮಾಡಿ ಆರ್ಥಿಕ ಸಬಲರಾಗಬೇಕು,” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಹೊಸಕೋಟೆ ಹನುಮಂತಪ್ಪ, ಹೊನ್ನೂರು ಹಾಲಪ್ಪ, ಪರುಸಪ್ಪ, ಸೋಮಲಿಂಗಪ್ಪ, ಎ.ಬಿ. ಮಲ್ಲಿಕಾರ್ಜುನ್ ಗೌಡ, ಎ.ಬಿ. ನಾಗರಾಜ್, ಕೃಷಿ ಅಧಿಕಾರಿಗಳಾದ ಹೆಚ್.ಎಲ್. ಸಂಗಪ್ಪ, ಷಣ್ಮುಖ್ ನಾಯ್ಕ್ ಹಾಗೂ ಇಲಾಖೆಯ ಸಿಬ್ಬಂದಿಗಳು, ಮಹಿಳೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Leave a comment