ಗಂಗಾವತಿ : ಜಾರ್ಖಂಡ್ನ ರಾಂಚಿಯಲ್ಲಿ ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ಯುವಜನರೊಂದಿಗೆ ಐಕ್ಯತೆ ವ್ಯಕ್ತಪಡಿಸಲು ತೆರಳಿದ್ದ AISA ರಾಷ್ಟ್ರೀಯ ಅಧ್ಯಕ್ಷೆ ಕಾಮ್ರೇಡ್ ನೇಹಾ ಹಾಗೂ ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಯನ್ನು ಸಿಪಿಐ(ಎಂಎಲ್) ಲಿಬರೇಶನ್ ತೀವ್ರವಾಗಿ ಖಂಡಿಸಿ.ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ರಾಜ್ಯಕಾರ್ಯದರ್ಶಿ ಕ್ಲಿಫ್ಟನ್ ಡಿ ರೋಜೊರಿಯೋ ಅವರು ಮಾತನಾಡಿ ಜಾರ್ಖಂಡ್ ನಲ್ಲಿ ನೇಹಾ ಅವರ ಮೇಲೆ ನಡೆದ ದಾಳಿ ಕೇವಲ ಪ್ರತ್ಯೇಕ ಗೂಂಡಾಗಿರಿಯ ಘಟನೆ ಅಲ್ಲ. ಮಹಿಳೆಯರು ಯುವಜನರ ಹೋರಾಟದ ಮುಂಚೂಣಿಯಲ್ಲಿ ನಿಂತು ರಾಜಕೀಯ ನಾಯಕತ್ವ ವಹಿಸುತ್ತಿರುವುದನ್ನು ಸಂಘ ಪರಿವಾರದ ಪಿತೃಸತ್ತಾತ್ಮಕ ರಾಜಕಾರಣ ಸಹಿಸಿಕೊಳ್ಳಲಾಗುತ್ತಿಲ್ಲ ಎಂಬುದನ್ನು ಈ ಘಟನೆ ಮತ್ತೊಮ್ಮೆ ಬಹಿರಂಗಪಡಿಸಿದೆ
ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುವಜನರ ಹೋರಾಟಗಳಲ್ಲಿ ಮಹಿಳಾ ವಿದ್ಯಾರ್ಥಿನಿಯರು ಮತ್ತು ಯುವತಿಯರು ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಅವರು ಮೌನ ಪ್ರೇಕ್ಷಕರಾಗಿರದೆ ಉದ್ಯೋಗ, ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ. ಮಹಿಳೆಯರನ್ನು ಕೇವಲ ಕುಟುಂಬದ ‘ಗೌರವ’ದ ಸಂಕೇತಗಳಾಗಿ ನೋಡಬೇಕೆಂಬ ಪಿತೃಸತ್ತಾತ್ಮಕ ಮನೋಭಾವಕ್ಕೆ, ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಮಹಿಳೆಯರು ನೇರ ಸವಾಲಾಕಿದ್ದಾರೆ ಎಂದು ಹೇಳಿದರು.
ಸಿಪಿಐ(ಎಂಎಲ್) ಲಿಬರೇಶನ್ ರಾಜ್ಯ ಸಮಿತಿ ಸದಸ್ಯರಾದ ನಿರ್ಮಲಾ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ,ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆ, ಬೆದರಿಕೆಗಳು ಹಾಗೂ ಇತರ ರೀತಿಯ ಕಿರುಕುಳದ ಆರೋಪಗಳು ಕೇಳಿಬರುತ್ತಿವೆ. ಮಹಿಳೆಯರನ್ನು ಹೆದರಿಸಿ ಅವರ ರಾಜಕೀಯ ಧ್ವನಿಯನ್ನು ಮೌನಗೊಳಿಸುವ ಯಾವುದೇ ಪ್ರಯತ್ನವನ್ನು ಮಹಿಳೆಯರನ್ನು ಮೌನಗೊಳಿಸಲು ಸಾಧ್ಯವಿಲ್ಲ.
ಜಾರ್ಖಂಡ್ನಲ್ಲಿ ನೇಹಾ ಮತ್ತು ಇತರ ಮಹಿಳಾ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಗೆ ಹೊಣೆಗಾರರನ್ನು ಗುರುತಿಸಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮಹಿಳಾ ಪ್ರತಿಭಟನಾಕಾರರಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರ ಮೇಲಿನ ಪ್ರತಿಯೊಂದು ದಾಳಿಯೂ ಇನ್ನಷ್ಟು ಮಹಿಳೆಯರನ್ನು ಹೋರಾಟದ ಮುಂಚೂಣಿಗೆ ತರುತ್ತದೆ. ಬೆದರಿಕೆ ಮತ್ತು ದಮನಕ್ಕೆ ನಮ್ಮ ಉತ್ತರ ಇನ್ನಷ್ಟು ಬಲವಾದ ಜನಾಂದೋಲನ ಎಂದು ಸಿಪಿಐ(ಎಂಎಲ್) ಲಿಬರೇಶನ್ ತಿಳಿಸಿದೆ.
ಉದ್ಯೋಗ, ಶಿಕ್ಷಣ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಿರುವ ಯುವಜನರ ಧ್ವನಿಯನ್ನು ಹತ್ತಿಕ್ಕುವ ಬದಲು, ನೇಮಕಾತಿ ಹಗರಣಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆಗಳ ಕುರಿತು ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ರಾಯಚೂರು ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್,ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು,ವಿಜಯ ನಗರ ಜಿಲ್ಲಾ ಕಾರ್ಯದರ್ಶಿ ಪರಸುರಾಮ್ ಸಂದೇರ್,ಕೆಂಚಪ್ಪ ಹೀರೆ ಖೇಡಾ,ಆರ್.ಎಚ್.ಕಲಮುಂಗಿ,ಸಣ್ಣ ಹನುಮಂತಪ್ಪ ಹುಲಿಹೈದರ,ಸಂತೋಷ ಗುಳೆದಹಟ್ಟಿ ಇತರರು ಇದ್ದರೂ
Leave a comment