ಬೆಂಗಳೂರು: ರಾಜ್ಯದ ಅಸ್ಪೃಶ್ಯ ಮಾದಿಗ ಸಮಾಜದ ಮೂರು ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಪರಿಶಿಷ್ಟ ಜಾತಿಯ (ಎಸ್ಸಿ) ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಶುಕ್ರವಾರ ಮಹತ್ವದ ತೀರ್ಮಾನ ಕೈಗೊಂಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪರಿಶಿಷ್ಟ ಜಾತಿಯ ಒಟ್ಟು ಶೇ 15ರಷ್ಟು ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದೆ, ಅದರೊಳಗೆ ಸಮಾನ ಹಂಚಿಕೆ ಮಾಡಲಾಗಿದೆ. ಎಡಗೈ, ಬಲಗೈ ಮತ್ತು ಸ್ಪೃಶ್ಯ ಸಮುದಾಯಗಳ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.
ಯಾರಿಗೆ ಎಷ್ಟು ಪಾಲು?
ಸಚಿವ ಸಂಪುಟದ ತೀರ್ಮಾನದಂತೆ ಪರಿಶಿಷ್ಟ ಜಾತಿಯ 101 ಉಪಜಾತಿಗಳನ್ನು ಮೂರು ಪ್ರಮುಖ ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ಹಂಚಲಾಗಿದೆ:
- ದಲಿತ ಎಡಗೈ (ಮಾದಿಗ ಮತ್ತು ಇತರೆ 18 ಉಪಜಾತಿಗಳು): ಶೇ5.25
- ದಲಿತ ಬಲಗೈ (ಹೊಲೆಯ ಮತ್ತು ಇತರೆ ಉಪಜಾತಿಗಳು): ಶೇ 5.25
- ಸ್ಪೃಶ್ಯ (ಲಂಬಾಣಿ, ಭೋವಿ, ಕೊರಚ, ಕೊರಮ) ಮತ್ತು ಇತರರು : ಶೇ.4.5
ಈ ಐತಿಹಾಸಿಕ ತೀರ್ಮಾನದಿಂದಾಗಿ ರಾಜ್ಯ ಸರ್ಕಾರಿ ಸೇವೆಯಲ್ಲಿ ಬಾಕಿ ಇರುವ ಸುಮಾರು 56,400 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ಸಿಗುವ ನಿರೀಕ್ಷೆಯಿದೆ. ಸಭೆಯಲ್ಲಿ ಸಚಿವರಾದ ಮುನಿಯಪ್ಪ, ಜಿ. ಪರಮೇಶ್ವರ್, ಎಚ್.ಸಿ. ಮಹದೇವಪ್ಪ, ಎಚ್.ಕೆ. ಪಾಟೀಲ್, ಸೇರಿದಂತೆ ದಲಿತ ಸಮುದಾಯದ ಪ್ರಮುಖ ನಾಯಕರು ಉಪಸ್ಥಿತರಿದ್ದರು.
Leave a comment