ಹರಪನಹಳ್ಳಿ : ಭಾರತದಲ್ಲಿ ಆರಂಭಗೊಂಡಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಲ್ಪಸಂಖ್ಯಾತರಿಗೆ ಆತಂಕದ ಕ್ಷಣಗಳನ್ನು ಸೃಷ್ಟಿಸಿದೆ ಎಂದು ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ದೂರಿದರು. ನಗರದ ಟಿ.ಎಂ.ಎ.ಇ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಜನದನಿ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಸಮಾರಂಭದಲ್ಲಿ ‘ಸುಳ್ಳುಗಳ ಮಾರುಕಟ್ಟೆಯಲ್ಲಿ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.
ಭಾರತದಲ್ಲಿ ಮುಸ್ಲೀಂಮರು ಆತಂಕದಲ್ಲಿ ಬದುಕುತ್ತಿದ್ದಾರೆ. ಅವರ ಜೊತೆ ನಿಲ್ಲುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಇಂದು ಆಗಬೇಕಿದೆ. ಎಸ್ಐಆರ್ ಅಲ್ಪಸಂಖ್ಯಾತರಿಗೆ ಪೆಡಂಭೂತವಾಗಿ ಬಿಟ್ಟಿರುವ ಬ್ರಹ್ಮಾಸ್ತ್ರ, ಇದನ್ನು ಪಾಶುಪತಾಸ್ತ್ರದಿಂದ ಒಡೆದು ಹಾಕಬೇಕಾಗಿದೆ ಎಂದು ಹೇಳಿದರು. ಮುಸ್ಲೀಂರಿಗೆ ಸರಿಯಾದ ಶಿಕ್ಷಣ, ಸಾಮಾಜಿಕವಾಗಿ ಎಚ್ಚರಿಸುವ ಕೆಲಸ ಮಾಡದೇ ಆಳುವ ಸರ್ಕಾರಗಳು ಮುಸಲ್ಮಾನರಿಗೆ ಮಾಡಿರುವ ದೊಡ್ಡ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾವಿರಾರು ದೇವರು, ಜಾತಿ, ಧರ್ಮಗಳಿರುವ ದೇಶದಲ್ಲಿ ಸಹಬಾಳ್ವೆ ಬದುಕಿದೆ. ಬಸವಣ್ಣ ಹೇಳಿದಂತೆ ಇವ ನಾರವ ಇವನಾರವ ಎನಿಸದಿರಯ್ಯ, ಇವ ನಮ್ಮವ ಎಂದೆನಿಸಯ್ಯ ಎಂಬುದು ಸಂವಿಧಾನದ ಆಶಯ. ಇದನ್ನು ಸಾಕಾರಗೊಳಿಸಲು ಪ್ರಯತ್ನಿಸಿ ಎಂದು ಸಲಹೆ ನೀಡಿದರು.
ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆಯನ್ನು ಒಡೆದು ಹಾಕುವ ಸುಳ್ಳುಗಳು ರಾರಾಜಿಸುತ್ತಿವೆ. ಧರ್ಮ, ಜಾತಿಗಳ ನಡುವೆ ಸಂಘರ್ಷ ಹುಟ್ಟು ಹಾಕುವ ವಿಷ ಬೀಜ ಬಿತ್ತುವ ಸುಳ್ಳು ಹೇಳುವ ಜನರಿಂದ ಪ್ರತಿಯೊಬ್ಬರು ಜಾಗೃತರಾಗಿರಬೇಕು. ಸಮಾಜದಲ್ಲಿರುವ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ಸುಳ್ಳುಗಳ ಮಾರುಕಟ್ಟೆಯನ್ನು ಮುರಿದು ಹಾಕುವ ಅಗತ್ಯವಿದೆ ಎಂದರು.
ಸಾಹಿತಿ ಡಿ.ರಾಮನಮಲಿ ಅಧ್ಯಕ್ಷತೆವಹಿಸಿದ್ದರು. ಲೇಖಕ ಇಸ್ಮಾಯಿಲ್ ಎಲಿಗಾರ, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚಂಗೆಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಅಬ್ದುಲ್ ರೆಹಮಾನ್, ಎಂ.ವಿ.ಅಂಜಿನಪ್ಪ, ಅಂಬೇಡ್ಕರ ಸಂಘದ ಅಧ್ಯಕ್ಷ ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರಾಚಾರ್ಯ ಸಿ.ಎಂ.ವೀರೇಶ್, ಮೇಟಿ ಕೊಟ್ರಪ್ಪ, ಹುಲಿಕಟ್ಟೆ ಚೆನ್ನಬಸಪ್ಪ, ಗುಡಿಹಳ್ಳಿ ಹಾಲೇಶ, ಕೆ.ಸುಭಾಷ, ಎನ್.ಜಿ.ಬಸವರಾಜ್, ಇದ್ದರು.
Leave a comment