ಹರಪನಹಳ್ಳಿ : ದಾವಣಗೆರೆ ನಗರ ಪ್ರದೇಶವಾಗಿ, ಶಿಕ್ಷಣ ಕೇಂದ್ರವಾಗಿ ದೇಶದ ಗಮನ ಸೆಳೆಯುವಂತೆ ಮಾಡುವಲ್ಲಿ ಹಿರಿಯ ರಾಜಕಾರಣಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಪಾತ್ರ ದೊಡ್ಡದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಶಿಕ್ಷಣ ಮತ್ತು ಉದ್ಯಮ ಸಾಮ್ರಾಜ್ಯ ಕಟ್ಟಿ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದಾರೆ. ಅವರು ತಳಮಟ್ಟದಿಂದ ಕೆಲಸ ಮಾಡಿ, ಮರವಾಗಿ ಲಕ್ಷಾಂತರ ಜನತೆಗೆ ನೆರಳು ಕೊಟ್ಟಿದ್ದಾರೆ. ಅಂತಹ ಮಹನೀಯ ರಾಜಕಾರಣಿ ನಮಗೆಲ್ಲಾ ಆದರ್ಶವಾಗಿದ್ದಾರೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ. ಎಚ್.ಕೆ.ಹಾಲೇಶ ಮಾತನಾಡಿ, 10ನೇ ತರಗತಿ ಮಾತ್ರ ಓದಿದ್ದ ಶಿವಶಂಕರಪ್ಪ ಅವರು ಉದ್ದಿಮೆ, ಶಿಕ್ಷಣ ಕ್ಷೇತ್ರವನ್ನು ಕಟ್ಟಿ ಬೆಳೆಸುವ ಮೂಲಕ ದಾವಣಗೆರೆ ನಗರವನ್ನು ಕರ್ನಾಟಕದ ಮ್ಯಾಂಚೆಸ್ಟರ್ ಆಗಿಸುವಲ್ಲಿ ಪ್ರಮುಖರಾಗಿದ್ದಾರೆ. ಅವರು ಕಟ್ಟಿ ಬೆಳೆಸಿದ ಬಾಪೂಜಿ ವಿದ್ಯಾಸಂಸ್ಥೆ ಪ್ರಪಂಚದಲ್ಲಿಯೇ ಪ್ರಸಿದ್ಧಿಯಾಗಿದೆ ಎಂದು ಅವರ ಸಾಧನೆಗಳನ್ನು ವಿವರಿಸಿದರು. ಸಾಧರ ಲಿಂಗಾಯತ ಸಮಾಜದ ತಾಲ್ಲೂಕು ಅಧ್ಯಕ್ಷ ಗುಂಡಗತ್ತಿ ಬಂದೋಳ್ ಮಂಜುನಾಥ ಮಾತನಾಡಿ, ಶಿವಶಂಕರಪ್ಪ ಅವರಿ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ, ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ ಶಿಪ್ ಕೊಡಲು ರೂ.5 ಕೋಟಿ ಠೇವಣಿ ಇಟ್ಟಿದ್ದಾರೆ. ಇದರಿಂದ ಸಾವಿರಾರು ಮಕ್ಕಳು ವಿದ್ಯಾಭ್ಯಾಸದ ನೆರವು ಪಡೆದಿದ್ದಾರೆ. ಪತ್ರಕರ್ತರ ಮಕ್ಕಳಿಗಾಗಿ ರೂ.1 ಕೋಟಿ ಮೀಸಲಿಟ್ಟಿರುವುದು ಸಹ ಅವರ ಕಾಳಜಿಯನ್ನು ತೋರಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ಮುಖಂಡ ಮುತ್ತಿಗಿ ಜಂಬಣ್ಣ, ಶುಕ್ರುಸಾಬ್, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ಎಚ್.ಕೆ.ಮಂಜುನಾಥ, ನಿವೃತ್ತ ಶಿಕ್ಷಕರಾದ ತೆಲಿಗಿ ಅಂಜಿನಪ್ಪ, ಬಾಲೇನಹಳ್ಳಿ ರೇವಣಸಿದ್ದಪ್ಪ, ಬೇಲೂರು ಸಿದ್ದೇಶ್ ಮಾತನಾಡಿದರು. ಮುಖಂಡರಾದ ಎಸ್.ಶಿವಪ್ಪ, ಕಡಕೋಳ್ ನೂರುದ್ದೀನ್ , ಸತ್ತರ್ ಸಾಹೇಬ್, ಭಾವಿಕಟ್ಟಿ ಭರ್ಮಪ್ಪ, ಮಂಡಕ್ಕಿ ಸುರೇಶ, ತಳವಾರ ರಾಜಪ್ಪ, ಗುಂಡಿ ಮಂಜುನಾಥ, ಪಟ್ನಾಮದ ಪರುಶುರಾಮ, ಗಿಡ್ಡಳ್ಳಿ ನಾಗರಾಜ, ಮೈದೂರು ಮಾರುತಿ, ಕವಸರ ವಿಜಯಕುಮಾರ್, ರಾಯದುರ್ಗದ ವಾಗೀಶ, ಮ್ಯಾಕಿ ದುರುಗಪ್ಪ, ದ್ಯಾಮಜ್ಜಿ ದಂಡ್ಯೆಪ್ಪ ಇದ್ದರು.
Leave a comment