ಹರಪನಹಳ್ಳಿ: "ಸರ್ಕಾರಿ ನೌಕರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ನೌಕರರ ಸಂಘ ಹಾಗೂ ತಾಲೂಕು ಘಟಕವು ಸದಾ ನಿಮ್ಮ ಬೆನ್ನೆಲುಬಾಗಿ ನಿಲ್ಲಲಿದೆ" ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾದ ಎನ್.ಜಿ. ಮನೋಹರ ಅವರು ಭರವಸೆ ನೀಡಿದರು. ಇಲ್ಲಿನ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಭಾನುವಾರ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಇಲಾಖೆಗಳ ನಿವೃತ್ತ ನೌಕರರು, ನಿವೃತ್ತ ಶಿಕ್ಷಕರು ಹಾಗೂ ಬಡ್ತಿ ಹೊಂದಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. "ಶಿಕ್ಷಕರು ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆಯೇ ವಿನಃ ಅವರ ಅನುಭವದಿಂದಲ್ಲ. ನಿವೃತ್ತಿಯ ನಂತರವೂ ನಾವು ಮತ್ತು ನಿವೃತ್ತ ನೌಕರರ ಸಂಘ ಸದಾ ನಿಮ್ಮ ಜೊತೆಗಿರುತ್ತೇವೆ. ನಿವೃತ್ತ ಜೀವನದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ವ್ಯಾಯಾಮ, ಪುಸ್ತಕ ಓದುವುದು, ತೋಟಗಾರಿಕೆ, ಸಂಗೀತ, ಕಲೆ, ಯೋಗ ಅಥವಾ ವಾಕಿಂಗ್ ಮಾಡುವ ಮೂಲಕ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು" ಎಂದು ಮನೋಹರ ಅವರು ಕಿವಿಮಾತು ಹೇಳಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಜಿಲ್ಲಾಧ್ಯಕ್ಷೆ ಲತಾ ಟಿ.ಎಚ್.ಎಂ ಮಾತನಾಡಿ, "ಮಹಿಳಾ ನೌಕರರಿಗೆ ಋತುಚಕ್ರದ ರಜೆ ಘೋಷಿಸುವಂತೆ ಸರ್ಕಾರಕ್ಕೆ ನಮ್ಮ ಸಂಘಟನೆಯು ಮೊದಲೇ ಧ್ವನಿಗೂಡಿಸಿ ಒತ್ತಾಯಿಸಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಈ ಹಿಂದೆ ನೌಕರರ ಪರವಾಗಿ ಇಂತಹ ಸಕ್ರಿಯ ಕಾರ್ಯಕ್ರಮಗಳು ನಡೆದಿರಲಿಲ್ಲ. ಆದರೆ ಪ್ರಸ್ತುತ ಅಧ್ಯಕ್ಷರಾದ ಮನೋಹರ್ ಅವರು ಹತ್ತಾರು ಜನಪರ ಕಾರ್ಯಕ್ರಮಗಳ ಮೂಲಕ ತಾಲೂಕು ಸಂಘಟನೆಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗಿಸಿದ್ದಾರೆ. ಸಂಘಟನೆಗಳು ವೃತ್ತಿಯ ಜೊತೆಗೆ ಪ್ರವೃತ್ತಿಯಾಗಬೇಕೇ ಹೊರತು, ಸಂಘಟನೆಯೇ ವೃತ್ತಿಯಾಗಬಾರದು. ನಾವೆಲ್ಲರೂ ಸೇರಿ ತಾಲೂಕಿನ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸೋಣ" ಎಂದರು. ಮಂಜುನಾಥ ಪೂಜಾರ್ ಅವರು ಮಾತನಾಡಿ, "ಶಾಲೆಗಳಲ್ಲಿ ೩೦ ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿರುವ ಶಿಕ್ಷಕರ ಸಮಯಪಾಲನೆ, ಕರ್ತವ್ಯ ನಿಷ್ಠೆ ಮತ್ತು ಮಕ್ಕಳೊಂದಿಗಿನ ಮಧುರ ಬಾಂಧವ್ಯ ನಿಜಕ್ಕೂ ಶ್ಲಾಘನೀಯ. ಇವರ ನಿವೃತ್ತ ಜೀವನ ಸುಖಕರವಾಗಿರಲಿ" ಎಂದು ಹಾರೈಸಿದರು. ಬಿಇಒ ಕಚೇರಿಯ ಇಸಿಒ ವೀರೇಶ್ ಮಾತನಾಡಿ, ನಿವೃತ್ತ ಹಾಗೂ ಬಡ್ತಿ ಪಡೆದ ಮುಖ್ಯ ಶಿಕ್ಷಕರನ್ನು ಕರೆಸಿ ಗೌರವಿಸುತ್ತಿರುವ ನೌಕರರ ಸಂಘದ ಕಾರ್ಯ ಸ್ತುತ್ಯರ್ಹ ಎಂದರು. ಶಿಕ್ಷಕ ಬಿ. ಆಂಜನೇಯ ಅವರೂ ಸಹ ವೇದಿಕೆಯಲ್ಲಿ ಅನಿಸಿಕೆಗಳನ್ನು ಹಂಚಿಕೊಂಡರು. ಇದೇ ವೇಳೆ ನಿವೃತ್ತ ಶಿಕ್ಷಕ ಸಲಾಂ ಅವರು "ಪ್ರೀತಿಯ ಗಾಳಿ ಬೀಸುತ್ತಿದೆ..." ಎಂಬ ಗೀತೆಯನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಷರೀಪ್ ಮಕರಬ್ಬಿ, ಸಂಘದ ಪ್ರಧಾನ ಕಾರ್ಯದರ್ಶಿ ಸೂರ್ಯನಾಯ್ಕ, ಗೌರವಾಧ್ಯಕ್ಷ ಎನ್.ಟಿ.ಸೋಮಪ್ಪ, ಜಿಲ್ಲಾ...
ಹರಪನಹಳ್ಳಿ : ನಾಟಿ ವೈದ್ಯರನ್ನು ಸರ್ಕಾರಿ ಆಯುಷ್ (AYUSH) ವಿಭಾಗದಡಿ ಸೇರಿಸಿ, ಅವರಿಗೆ ಅಧಿಕೃತ 'ರಾಷ್ಟ್ರೀಯ ನೋಂದಣಿ ಸಂಖ್ಯೆ' ಹಾಗೂ 'ಗುರುತಿನ ಚೀಟಿ' ನೀಡಬೇಕು ಎಂದು ಆಗ್ರಹಿಸಿ ಇಲ್ಲಿಯ ಪಾರಂಪರಿಕ ನಾಟಿ ವೈದ್ಯರ ಸಂಘ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಚಳವಳಿಗೆ ಶನಿವಾರ ಚಾಲನೆ ನೀಡಿದ್ದಾರೆ. ಕರ್ನಾಟಕದ ಸಾಂಪ್ರದಾಯಿಕ ನಾಟಿ ವೈದ್ಯರು ತಮಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡುವಂತೆ ಆಗ್ರಹಿಸಿ ನೇರವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಕರೋನಾ ಮಹಾಮಾರಿ ಇಡೀ ದೇಶವನ್ನೇ ಕಾಡಿದ ಸಂದರ್ಭದಲ್ಲಿ, ಹಳ್ಳಿಗಳಲ್ಲಿ ಉಚಿತವಾಗಿ ಕಷಾಯ ವಿತರಿಸುವ ಮೂಲಕ ರೋಗ ನಿಯಂತ್ರಣದಲ್ಲಿ ನಮ್ಮ ನಾಟಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಅನೇಕ ದೀರ್ಘಕಾಲದ ಕಾಯಿಲೆಗಳಿಗೆ, ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಗಿಡಮೂಲಿಕೆಗಳ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಟಿ ವೈದ್ಯರಿಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದಿರುವುದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸರ್ಕಾರವು ನೆರವು ನೀಡಬೇಕು. ನಾಟಿ ವೈದ್ಯಕೀಯದಲ್ಲಿ ಜ್ಞಾನ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರದಿಂದಲೇ ಅಧಿಕೃತ ಪ್ರಮಾಣಪತ್ರ (ಸರ್ಟಿಫಿಕೇಟ್) ನೀಡುವ ವ್ಯವಸ್ಥೆಯಾಗಬೇಕು....