ಹರಪನಹಳ್ಳಿ : ನಾಟಿ ವೈದ್ಯರನ್ನು ಸರ್ಕಾರಿ ಆಯುಷ್ (AYUSH) ವಿಭಾಗದಡಿ ಸೇರಿಸಿ, ಅವರಿಗೆ ಅಧಿಕೃತ ‘ರಾಷ್ಟ್ರೀಯ ನೋಂದಣಿ ಸಂಖ್ಯೆ’ ಹಾಗೂ ‘ಗುರುತಿನ ಚೀಟಿ’ ನೀಡಬೇಕು ಎಂದು ಆಗ್ರಹಿಸಿ ಇಲ್ಲಿಯ ಪಾರಂಪರಿಕ ನಾಟಿ ವೈದ್ಯರ ಸಂಘ ಪ್ರಧಾನಿ ನರೇಂದ್ರಮೋದಿ ಅವರಿಗೆ ಪತ್ರ ಚಳವಳಿಗೆ ಶನಿವಾರ ಚಾಲನೆ ನೀಡಿದ್ದಾರೆ.
ಕರ್ನಾಟಕದ ಸಾಂಪ್ರದಾಯಿಕ ನಾಟಿ ವೈದ್ಯರು ತಮಗೆ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡುವಂತೆ ಆಗ್ರಹಿಸಿ ನೇರವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.
ಕರೋನಾ ಮಹಾಮಾರಿ ಇಡೀ ದೇಶವನ್ನೇ ಕಾಡಿದ ಸಂದರ್ಭದಲ್ಲಿ, ಹಳ್ಳಿಗಳಲ್ಲಿ ಉಚಿತವಾಗಿ ಕಷಾಯ ವಿತರಿಸುವ ಮೂಲಕ ರೋಗ ನಿಯಂತ್ರಣದಲ್ಲಿ ನಮ್ಮ ನಾಟಿ ವೈದ್ಯರು ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಅನೇಕ ದೀರ್ಘಕಾಲದ ಕಾಯಿಲೆಗಳಿಗೆ, ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಗಿಡಮೂಲಿಕೆಗಳ ಮೂಲಕ ಯಶಸ್ವಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ನಾಟಿ ವೈದ್ಯರಿಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದಿರುವುದರಿಂದ ಅವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಸರ್ಕಾರವು ನೆರವು ನೀಡಬೇಕು. ನಾಟಿ ವೈದ್ಯಕೀಯದಲ್ಲಿ ಜ್ಞಾನ ಮತ್ತು ಅರ್ಹತೆ ಹೊಂದಿರುವ ವ್ಯಕ್ತಿಗಳಿಗೆ ಸರ್ಕಾರದಿಂದಲೇ ಅಧಿಕೃತ ಪ್ರಮಾಣಪತ್ರ (ಸರ್ಟಿಫಿಕೇಟ್) ನೀಡುವ ವ್ಯವಸ್ಥೆಯಾಗಬೇಕು.
ಪಾರಂಪರಿಕ ವೈದ್ಯಕೀಯ ಪದ್ಧತಿಗಳ ನಿರ್ವಹಣೆಗಾಗಿ ಆಯುಷ್ ಸಚಿವಾಲಯದಲ್ಲಿಯೇ ಒಂದು ಪ್ರತ್ಯೇಕ ಮಂಡಳಿ ಅಥವಾ ವಿಭಾಗವನ್ನು ಸ್ಥಾಪಿಸಬೇಕು. ಗ್ರಾಮೀಣ ಭಾಗಗಳಲ್ಲಿ ‘ನಾಟಿ ಚಿಕಿತ್ಸಾ ಕೇಂದ್ರ’ಗಳನ್ನು ಸ್ಥಾಪಿಸಲು ಹಾಗೂ ನಾಟಿ ವೈದ್ಯರ ಸೇವೆಗೆ ಸರ್ಕಾರದಿಂದ ಆರ್ಥಿಕ ಸಹಾಯಧನ ಒದಗಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದ ಎಲ್ಲಾ ಪಾರಂಪರಿಕ ವೈದ್ಯರ ಪರವಾಗಿ ಈ ಮನವಿಯನ್ನು ನವದೆಹಲಿಯ ಸೌತ್ ಬ್ಲಾಕ್ನಲ್ಲಿರುವ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ರವಾನಿಸಲಾಗಿದೆ. ಸರ್ಕಾರ ಹಾಗೂ ಆಯುಷ್ ಇಲಾಖೆಯು ಶೀಘ್ರವೇ ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ನೀಡಲಿದ್ದು, ನಮ್ಮ ನೆಲದ ಮೂಲ ವೈದ್ಯ ಪದ್ಧತಿಗೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಮನ್ನಣೆ ಸಿಗಲಿದೆ ಎಂಬ ವಿಶ್ವಾಸವನ್ನು ನಾಟಿ ವೈದ್ಯರು ವ್ಯಕ್ತಪಡಿಸಿದ್ದಾರೆ. ಪತ್ರ ಚಳವಳಿಯಲ್ಲಿ ವಿ.ಸಣ್ಣ ಅಜ್ಜಯ್ಯ, ಹಗರಿಬೊಮ್ಮನಹಳ್ಳಿ ರಾಜಭಕ್ಷಿ, ಕೆ.ಕಲ್ಲಹಳ್ಳಿ ಗೋಣಿಬಸಪ್ಪ, ಮೈಲಾರಪ್ಪ, ಚಿಗಟೇರಿ ಆನಂದಪ್ಪ, ಮಹಮ್ಮದ ರಫೀಕ್, ಸುರೇಶ್ ಚಿಗಟೇರಿ, ಮಹ್ಮದ್, ಸಾಬ್, ಮಂಜುನಾಥ ಅರಸೀಕೆರೆ, ಕರಿಬಸಪ್ಪ, ಕೆ.ರವಿಕುಮಾರ, ಲಕ್ಷ್ಮಣ, ಬಸವನಗೌಡ, ಈರಮ್ಮ, ರಮೇಶ್, ಹೆಚ್.ನಾಗಪ್ಪ, ಕೆ.ಕೊಟ್ರಪ್ಪ ಇದ್ದರು.
Leave a comment