ಹರಪನಹಳ್ಳಿ : ಸಮೃದ್ಧ ಸದೃಢ ನಾಡು ಕಟ್ಟುವುದೇ ಧರ್ಮ ಪೀಠಗಳ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ವಿಜಯನಗರ ಜಿಲ್ಲೆ ಹರಪನಹಳ್ಳಿ ನಗರದ ತೆಗ್ಗಿನಮಠದಲ್ಲಿ ಮಂಗಳವಾರ ಜರುಗಿದ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಪದಗ್ರಹಣ, ಲಾಂಛನ, ಮತ್ತು ವೆಬ್ ಸೈಟ್ ಬಿಡುಗಡೆ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಸಂವೇದನಾಶೀಲ ಜೀವನಕ್ಕೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರ. ಬದುಕಿನ ಉನ್ನತಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಅಡಿಪಾಯ. ಸತ್ಕಾರ್ಯಗಳ ಸಾಧನೆಗೆ ಸಾಮರಸ್ಯ ಮತ್ತು ಸಂಘಟನೆ ಅಗತ್ಯ ಎಂದು ತಿಳಿಸಿದರು.
ಖಜಾಂಚಿ ತೆಗ್ಗಿನಮಠ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಸ್ವಾಮೀಜಿ ಕೇವಲ ಮಠದ ಕಾವಲು ನಾಯಿಯಲ್ಲ. ಅವರೋ ನಾಡಿನ ಕಲ್ಯಾಣ ಮಾಡುವ ಶಕ್ತಿ ಹೊಂದಿರುವ ದೊಡ್ಡ ಶಕ್ತಿ. ಶಿವಾಚಾರ್ಯರು ಸಂಘಟಿತ ಆಗಿರುವುದು ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಶಿವಗಂಗೆ ಮಲಯಶಾಂತಮುನಿ ಸ್ವಾಮೀಜಿ, ಪಂಚಪೀಠಗಳು ವೀರಶೈವ ಧರ್ಮ ವಿಶ್ವವ್ಯಾಪಿ ಎಂಬುದನ್ನು ಸಾಭೀತುಪಡಿಸಿವೆ ಎಂದರು.
ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿಯ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು, ಸಂಸ್ಥೆಯ ರಚನೆ ಮತ್ತು ಉದ್ದೇಶಗಳನ್ನು ವಿವರಿಸಿದರು.
ಗೌರವ ಅಧ್ಯಕ್ಷ ಎಡೆಯೂರು ರೇಣುಕಾ ಶಿವಾಚಾರ್ಯ ಸ್ವಾಮೀಜಿ, ನಿಕಟಪೂರ್ವ ಅಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶಿವಗಂಗೆ ಮಲಯಶಾಂತಮುನಿ ಸ್ವಾಮೀಜಿ ಮಾತನಾಡಿದರು.
ಬೆಳಗಾವಿ, ಧಾರವಾಡ, ಮಂಡ್ಯ , ಮೈಸೂರು, ಚಾಮರಾಜನಗರ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಕೊಡಗು, ಹಾಸನ, ವಿಜಯನಗರ, ಬಳ್ಳಾರಿ, ಕಾರವಾರ, ಹಾವೇರಿ, ಗದಗ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಸ್ವಾಮೀಜಿಗಳು ಪ್ರಮಾಣ ವಚನ ಸ್ಚೀಕರಿಸುವ ಮೂಲಕ ಸಮಾನ ಮನಸ್ಕ ವೀರಶೈವ ಮಠಗಳು ಒಟ್ಟಾಗಿರುವ ಸಂದೇಶ ನೀಡಿದರು.
ಉಪಾಧ್ಯಕ್ಷರಾದ ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿ,ಮಹಾರಾಷ್ಟ್ರ ನಾಗಣಸೂರು ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿ, ತೆಲಂಗಾಣ ಬಿಚಗುಂದದ ಸೋಮಲಿಂಗ ಸ್ವಾಮೀಜಿ, ವಕ್ತಾರರಾದ ಎಮ್ಮಿಗನೂರು ವಾಮದೇವ ಮಹಾಂತ ಸ್ವಾಮೀಜಿ, ಬೆಂಗಳೂರು ಮಹಾಂತಲಿಂಗ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಸ್ವಾಮೀಜಿ ಅವರುಗಳು ಸಂಸ್ಥೆಯ ವಿವಿಧ ಹುದ್ದೆ ಅಲಂಕರಿಸಿದರು. ತೆಗ್ಗಿನಮಠದ ಆಡಳಿತಾಧಿಕಾರಿ ಟಿ.ಎಂ.ಚಂದ್ರಶೇಖರಯ್ಯ, ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಂ.ರಾಜಶೇಖರ ಇದ್ದರು.
Leave a comment