ಕೂಡ್ಲಿಗಿ : ‘ಕ್ಷೇತ್ರದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಣೆಯ ಜತೆಗೆ ಧಾರ್ಮಿಕ ಕೇಂದ್ರಗಳ ಪುನರುಜ್ಜೀವನಕ್ಕೂ ಒತ್ತು ನೀಡಲಾಗುತ್ತಿದೆ’ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಗ್ರಾಮ ದೇವತೆ ಶ್ರೀ ಊರಮ್ಮ ದೇವಿಗೆ ಭಕ್ತರ ದೇಣಿಗೆಯಿಂದ ಮಾಡಿಸಲಾದ ಸುಮಾರು 25 ಲಕ್ಷ ರೂ. ಮೌಲ್ಯದ ನೂತನ ಬಂಗಾರದ ಮುಖ ಹಾಗೂ ಕಿರೀಟವನ್ನು ಮಂಗಳವಾರ ಭಕ್ತಿಭಾವದಿಂದ ಅರ್ಪಿಸಿದ ಬಳಿಕ ಅವರು ಮಾತನಾಡಿದರು.
ಕಳೆದ ವರ್ಷ ಸುಮಾರು ರೂ 3 ಕೋಟಿ ಗೂ ಅಧಿಕ ವೆಚ್ಚದಲ್ಲಿ ಊರಮ್ಮ ದೇವಿಯ ಭವ್ಯ ದೇವಸ್ಥಾನ ನಿರ್ಮಿಸಲಾಗಿತ್ತು. ಈಗ ಭಕ್ತರು ನೀಡಿದ ದೇಣಿಗೆಯಲ್ಲಿ ದೇವಿಗೆ ಸ್ವರ್ಣ ಮುಖ ಮತ್ತು ಕಿರೀಟ ಮಾಡಿಸುವ ಮೂಲಕ ಧಾರ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ದೇವಸ್ಥಾನ ನಿರ್ಮಾಣದಲ್ಲಿ ಆಡಳಿತ ಮಂಡಳಿ ಹಾಗೂ ಭಕ್ತರ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಶಾಸಕನಾಗಿ ಗ್ರಾಮದೇವತೆ ದೇವಸ್ಥಾನಕ್ಕೆ ಸಹಕಾರ ನೀಡುವುದರೊಂದಿಗೆ, ಮುಂಬರುವ ದಿನಗಳಲ್ಲಿ ಕ್ಷೇತ್ರದ ಎಲ್ಲ ದೇವಸ್ಥಾನಗಳಿಗೂ ಅಗತ್ಯ ಮೂಲಸೌಕರ್ಯ ಹಾಗೂ ಅನುದಾನ ನೀಡಿ ಅಭಿವೃದ್ಧಿಪಡಿಸುವೆ’ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ದೇವಿಯ ನೂತನ ಚೌಕಿ ಮನೆಗೆ ಗಂಗೆ ತರುವ ಮೂಲಕ ಲೋಕಾರ್ಪಣೆ ಮಾಡಲಾಯಿತು.
ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎಚ್.ವೀರನಗೌಡ, ಹಿ.ಮ.ಚಿದಾನಂದ ಸ್ವಾಮಿ, ಮುಖಂಡರಾದ ಉದಯ ಜನ್ನು, ಎಸ್.ಸುರೇಶ್, ಸಿ.ಬಿ.ಜಯರಾಂ ನಾಯಕ, ಟಿ.ಜಿ.ಮಲ್ಲಿಕಾರ್ಜುನ ಗೌಡ, ಶೆಟ್ರು ಬಸವರಾಜ, ಬಣಕಾರ ಮಂಜುನಾಥ, ಢಾಣಿ ರಾಘವೇಂದ್ರ, ಢಾಣಿ ಚೌಡಮ್ಮ, ಶೆಟ್ರು ಬಸವರಾಜ, ಅರ್ಚಕ ನಾಗರಾಜ, ಈರಣ್ಣ, ಕೆ.ಈಶಪ್ಪ, ಬಿ.ಕೆ.ರಾಘವೇಂದ್ರ, ಕಡ್ಡಿ ಮಂಜುನಾಥ ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
Leave a comment