ಹರಪನಹಳ್ಳಿ : ತಾಲ್ಲೂಕಿನ ಗುಳೇದಹಟ್ಟಿ ತಾಂಡದ ಮನೆಯಲ್ಲಿ ನವ ವಿವಾಹಿತೆಯ ಶವ ಪತ್ತೆಯಾಗಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಕೌಶಲ್ಯ (25) ಮೃತ ನವ ವಿವಾಹಿತೆ. ಯರಬಳ್ಳಿ ತಾಂಡದ ಕೌಶಲ್ಯ ಅವರನ್ನು ಗುಳೇದಹಟ್ಟಿ ತಾಂಡದ ಶಿವಕುಮಾರ್ ನಾಯ್ಕ ಎಂಬುವವರೊಂದಿಗೆ ಮೂರು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಶಿವಕುಮಾರ್ ನಾಯ್ಕ ಬೆಂಗಳೂರು ಕೋಣನಕುಂಟೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದ್ದು, ಮದುವೆ ಬಳಿಕವೂ ಕೌಶಲ್ಯ ಅವರನ್ನು ಗುಳೇದಹಟ್ಟಿ ತಾಂಡದಲ್ಲಿಯೇ ಬಿಟ್ಟು ಹೋಗಿದ್ದರು. ಮೊನ್ನೆಯಷ್ಟೇ ಶಿವಕುಮಾರ್ ನಾಯ್ಕ ಸ್ವಗ್ರಾಮಕ್ಕೆ ಮರಳಿದ್ದರು. ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದ್ದು, ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಕೌಶಲ್ಯ ಪೋಷಕರು ಆರೋಪಿಸಿದ್ದಾರೆ.
ಮದುವೆಗೆ ವರದಕ್ಷಿಣೆಯಾಗಿ 18 ತೊಲ ಬಂಗಾರ, ಮೂರು ಲಕ್ಷ ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾಗಿತ್ತು. ಆದರೂ ಇನ್ನು ವರದಕ್ಷಿಣೆಗೆ ದುಂಬಾಲು ಬಿದ್ದಿದ್ದ ಅವರು, ಮಗಳ ಶೀಲದ ಕುರಿತು ಶಂಕಿಸುತ್ತಿದ್ದರು. ಇದೇ ಕಾರಣಕ್ಕೆ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಮೃತ ಕೌಶಲ್ಯ ಅವರ ತಾಯಿ ಆರೋಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಡಾ.ಸಂತೋಷ್ ಚೌಹಾಣ್, ವೃತ್ತ ನಿರೀಕ್ಷಕ ಮಹಾಂತೇಶ್ ಸಜ್ಜನ್, ಸಬ್ ಇನ್ಸ್ಪೆಕ್ಟರ್ ವಿಜಯ್ ಕೃಷ್ಣ ಭೇಟಿ ಪರಿಶೀಲನೆ ನಡೆಸಿದ್ದಾರೆ.
Leave a comment