ಹರಪನಹಳ್ಳಿ : ‘ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡುವ ಹೊಣೆಯನ್ನು ಪ್ರತಿಯೊಬ್ಬರೂ ಹೊರಬೇಕು’ ಎಂದು ಪ್ರಾಂಶುಪಾಲ ಡಾ.ಎಂ ಸುರೇಶ್ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದ ವಾಲ್ಮೀಕಿ ನಗರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಧಾರ್ಮಿಕ ಆಚರಣೆ, ತ್ಯಾಗ, ಭಕ್ತಿ, ಪ್ರೀತಿಯಿಂದ ಸಹಬಾಳ್ವೆ ನಡೆಸಿದರೆ ಕಷ್ಟಕಾಲದಲ್ಲಿ ಮನುಷ್ಯನಿಗೆ ವಜ್ರ ಕವಚದಂತೆ ರಕ್ಷಣೆ ಒದಗಿಸುತ್ತದೆ. ಈ ಧಾರ್ಮಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗೂ ಕೊಂಡೊಯ್ಯಬೇಕು ಎಂದರು.
ಮುಖಂಡ ಐ.ಸಲಾಂ ಸಾಬ್ ಮಾತನಾಡಿ, ‘ ಗ್ರಾಮದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವು ವಿಶೇಷ ಎನಿಸಿದೆ. ಜಾತಿವ್ಯವಸ್ಥೆಯೂ ಮೀರಿ ಹಬ್ಬವನ್ನು ಸರ್ವಧರ್ಮದವರು ಆಚರಿಸುತ್ತೇವೆ. ಇದು ಇತರರಿಗೂ ಮಾದರಿಯಾಗಲಿ ಎಂದರು.
ಗಣೇಶ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಐದು ದಿನಗಳ ಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ದಾಸೋಹ ನಡೆದವು. ರಂಗೋಲಿ ಸ್ಪರ್ಧೆ, ಚಿತ್ರಕಲೆ, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ನಡೆದವು.
ಈ ಸಂದರ್ಭದಲ್ಲಿ ಕೆ.ಮಹಾಂತೇಶ್, ಮಂಜಪ್ಪ, ರಂಗಪ್ಪ, ಡಿ.ಹನುಮಂತಪ್ಪ, ಅಡ್ಡಿ ಚನ್ನವೀರಪ್ಪ, ಕೊಟ್ರೇಶ್, ಹಾಲೇಶ್, ಪರಸಪ್ಪ, ಸಂತೋಷ, ಮಾರುತಿ, ಪ್ರದೀಪ, ಸುಧಾಕರ್ ಸೇರಿದಂತೆ ಊರಿನ ಮುಖಂಡರು, ಇತರರು ಇದ್ದರು.
Leave a comment