ಭಕ್ತಿ ಭಂಡಾರಿ ಬಸವಣ್ಣನ ಸಾಧನೆ ಪ್ರದರ್ಶನ

Sirisuddi Kannada
2 Min Read

ಹರಪನಹಳ್ಳಿ : ಇಲ್ಲಿಯ ಹಳೆ ಬಸ್ ನಿಲ್ದಾಣದಲ್ಲಿ ಎಂ.ಪಿ.ರವೀಂದ್ರ ಪ್ರತಿಷ್ಠಾನದಿಂದ ಶನಿವಾರ ರಾತ್ರಿ ಆಯೋಜಿಸಿದ್ದ ಕಾರ್ತಿಕ ಮಾಸ ನಾಟಕೋತ್ಸವದಲ್ಲಿ ಸಾಣೆಹಳ್ಳಿ ಶಿವಸಂಚಾರ  ರಂಗ ಕಲಾವಿದರು ಜಂಗಮದೆಡೆಗೆ ನಾಟಕ ಪ್ರದರ್ಶಿಸಿದರು.

ನಾಟಕೋತ್ಸವಕ್ಕೆ ಚಾಲನೆ ನೀಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಮಾತನಾಡಿ, ರಂಗಭೂಮಿ ಕಲೆ ಮತ್ತು ಕಲಾವಿದರನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಭಕ್ತಿ ಭಂಡಾರಿ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅಂತಹ ಮಹನೀಯರು ಹೋರಾಟದ ನೆನಪು ಮೆಲುಕು ಹಾಕುವ ಇಂತಹ ನಾಟಕಗಳು ಹೆಚ್ಚು ಪ್ರದರ್ಶನಗೊಳ್ಳಬೇಕು. ನಾಟಕ ನೋಡುಗರ ಸಂಖ್ಯೆಯು ಹೆಚ್ಚಾಗಬೇಕು ಎಂದರು.

ವಚನಕಾರ ಬಸವಣ್ಣನವರ ಸಮ ಸಮಾಜ ನಿರ್ಮಾಣದ ಕನಸ್ಸು, ಬಸವಾದಿ ಶರಣರು ರಚಿತ ವಚನಗಳ ಸುಶ್ರಾವ್ಯ ಗಾಯನದ ನಡುವೆ ಬಸವಣ್ಣನ ಹೋರಾಟವನ್ನು ಪಾತ್ರಧಾರಿಗಳು ಪ್ರದರ್ಶಿಸಿದರು. ಬಸವಣ್ಣ ಬಾಲ್ಯದಲ್ಲೇ ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಡುತ್ತಿರುವುದು ಆರಂಭದ ದೃಶ್ಯದಿಂದ ವ್ಯಕ್ತವಾಗುತ್ತದೆ. ಆತ ಸ್ಥಾವರವಾಗದೇ, ಜಂಗಮದೆಡಗೆ ನಡೆಯುವುದು ನಾಟಕದ ಸತ್ವಕ್ಕೆ ಸಾಕ್ಷಿಯಾಯಿತು. ಜಾತಿಯ ಭೂತದಿಂದ ಹೊರಬಂದ ವಿಶ್ವಪ್ರೇಮಿಯಾಗಿ ಹೊರಹೊಮ್ಮಿದ ಬಸವಣ್ಣ ಮಾನವೀಯತೆಯ ಸಾಕಾರಮೂರ್ತಿ, ವಿವೇಕಿ, ಅರ್ಥಶಾಸ್ತ್ರಜ್ಞ, ರಾಜನೀತಿಜ್ಞ, ಧೈರ್ಯಶಾಲಿ ಎಂಬುದನ್ನು ನಾಟಕದ ತಿರುಳು.

ಕೊನೆಯ ದೃಶ್ಯದಲ್ಲಿ  ನಡೆ ನುಡಿ ಒಂದಾದರೆ ಏನೆಲ್ಲಾ ಸಾಧಿಸಬಹುದು, ಬೆಳಕು ಸೃಷ್ಟಿ ಮಾಡುವವರ ಜೊತೆಯಿಲ್ಲ, ಅದು ಎಲ್ಲ ಕಡೆಗೂ ಇದೆ, ಆ ಸಾಮರಸ್ಯದ ಬೆಳಕು ಪಡೆಯುವುದೇ ನಿಜ ಜಂಗಮ ಎಂಬುದನ್ನು ನಾಟಕದ ಮೂಲಕ ಶಿವಸಂಚಾರ ತಂಡದ ಕಲಾವಿದರು  ಪ್ರಸ್ತುತಪಡಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದರು. ಬಸವಣ್ಣನ ಪಾತ್ರದಲ್ಲಿ ಸುನೀಲ ಕಲಬುರಗಿ, ಅಲ್ಲಮಪ್ರಭು –ಬಸವರಾಜ ತಮ್ಮಣ್ಣ ಪೂಜಾರಿ, ಮಾದರಸ- ವಿಶ್ವಾಸರೆಡ್ಡಿ, ಸವಿತಾ, ಶ್ರೀಶೈಲ, ಪ್ರವೀಣ ಕೊಪ್ಪಳ, ಉದಯಕುಮಾರ, ದೀನೇಶ, ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಸುಹಾಸ್, ರಾಜೇಶ್, ಜನಾರ್ಧನ್ ಅವರು ವಿವಿಧ ಪಾತ್ರಗಳಿಗೆ ಜೀವ ತುಂಬಿದರು.  ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕಂಚಿಕೇರಿ ಜಯಲಕ್ಷ್ಮಿ, ವಸಂತಪ್ಪ, ಮೈದೂರು ಒ.ರಾಮಪ್ಪ, ದ್ವಾರಕೀಶ ರೆಡ್ಡಿ, ಸಾಸ್ವಿಹಳ್ಳಿ ನಾಗರಾಜ್, ಮತ್ತೂರು ಬಸವರಾಜ್, ಮತ್ತಿಹಳ್ಳಿ ರಾಮಪ್ಪ, ಇತರರಿದ್ದರು.

 

 

 

Share This Article
Leave a Comment