ಹರಪನಹಳ್ಳಿ: ‘ಗ್ರಾಮೀಣ ಕಲಾವಿದರು ಎಂದರೆ ಹಳ್ಳಿಯ ನಾಡಿಮಿಡಿತವಿದ್ದಂತೆ. ಕಲೆ, ಸಾಹಿತ್ಯ, ಸಂಗೀತ ಮತ್ತು ನಾಟಕಗಳು ಕೇವಲ ಪುಸ್ತಕಕ್ಕೆ ಸೀಮಿತವಲ್ಲ; ಅವು ಕಲಾವಿದರ ಬದುಕಿನ ಅವಿಭಾಜ್ಯ ಅಂಗಗಳಾಗಿವೆ’ ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಸದಸ್ಯರ 12ನೇ ಸಭೆ ಹಾಗೂ ಗ್ರಾಮೀಣ ಜನರಿಗೆ ಜಾನಪದ ಕಲೆ ಜಾಗೃತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಗಲು ಹೊಲದಲ್ಲಿ ಬೆವರು ಸುರಿಸಿ, ರಾತ್ರಿ ವೇಳೆ ಡೊಳ್ಳು ಕುಣಿತ, ಬಯಲಾಟ ಹಾಗೂ ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವ ಅವರು ಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದರು. ಕುರಿ ಕಾಯುತ್ತಲೇ ಜನಪದ ಗೀತೆಗಳನ್ನು ಹಾಡುವ ಇವರಿಗೆ ಕಲೆ ಕೇವಲ ಹವ್ಯಾಸವಲ್ಲ, ಅದೊಂದು ಪವಿತ್ರ ಕಾಯಕ ಎಂದು ಬಣ್ಣಿಸಿದರು. ಸರ್ಕಾರವು ಅನೇಕ ಯೋಜನೆಗಳನ್ನು ಘೋಷಿಸುತ್ತದೆ, ಆದರೆ ಅರ್ಹ ಗ್ರಾಮೀಣ ಕಲಾವಿದರಿಗೆ ಅವು ತಲುಪುತ್ತಿಲ್ಲ. ಎಷ್ಟೋ ಜಾನಪದ ಕಲಾವಿದರಿಗೆ ಇಂದಿಗೂ ಗುರುತಿನ ಚೀಟಿ ಹಾಗೂ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.
ಅರಸೀಕೆರೆ ಗೊಂದಲಿಗರ ಗೋಪಾಲ್ ಮಾತನಾಡಿ, ‘ತಿಂದು ಬಿಸಾಡಿದ ಬೀಜ ಲಕ್ಷಾಂತರ ಗಿಡವಾಗಿ ಬೆಳೆಯುವಂತೆ, ಗ್ರಾಮೀಣ ಕಲಾವಿದರ ಹಾಡು ಮತ್ತು ಕುಣಿತಗಳು ಸಂಸ್ಕೃತಿಯನ್ನು ಉಳಿಸುತ್ತಿವೆ. ಡೊಳ್ಳು ಕುಣಿತವಿಲ್ಲದೆ ಹಳ್ಳಿಯ ಹಬ್ಬಗಳಿಗೆ ಬಣ್ಣವಿಲ್ಲ. ಬಯಲಾಟಗಳು ಇಲ್ಲದಿದ್ದರೆ ರಾಮಾಯಣ-ಮಹಾಭಾರತದಂತಹ ಮಹಾಕಾವ್ಯಗಳು ಜನರಿಗೆ ತಲುಪುತ್ತಿರಲಿಲ್ಲ’ ಎಂದರು. ನಂದಿಬೇವೂರು ಶಿಕ್ಷಕ ಬಿ. ವಸಂತ್ ಮಾತನಾಡಿ, ‘ಜಾನಪದ ಗೀತೆಗಳಿಲ್ಲದಿದ್ದರೆ ನಮ್ಮ ಭಾಷೆ ಮತ್ತು ಇತಿಹಾಸ ಮರೆಯಾಗುತ್ತಿತ್ತು. ಕಲೆ ಎಂಬುದು ಮನರಂಜನೆಯ ಸಾಧನವಲ್ಲ, ಅದು ಸಮಾಜವನ್ನು ಕಟ್ಟುವ ಶಕ್ತಿ. ಸ್ವಾರ್ಥವಿಲ್ಲದ ಸೇವೆಯೇ ನಿಜವಾದ ಸಾಹಿತ್ಯ’ ಎಂದು ಹೇಳಿದರು.
ಉತ್ತಂಗಿ ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಲ್ಯಾಣ ಕಲಾವಿದರ ತಾಲ್ಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ, ಬಾಡದ ನಾರಪ್ಪ, ಸಣ್ಣ ಅಜ್ಜಯ್ಯ, ಕಲಾವಿದರಾದ ಸಂಕಳ್ಳಿ ಶಿವಣ್ಣ, ಗುಂಡಗತ್ತಿ ಮಂಜುನಾಥ್, ಹನುಮಂತ ಗೌಡ್ರು, ಅಜ್ಜಯ್ಯ ಸ್ವಾಮಿ ಹೊಸಕೋಟೆ, ರವೀಂದ್ರಣ್ಣ, ಗಂಗಜ್ಜಿ, ನಾಗರಾಜ್, ಜಗದೀಶ್ ಪೂಜಾರ್, ಶಂಭುಲಿಂಗನಗೌಡ, ಎಚ್.ಕೆ. ಮಲ್ಲಪ್ಪ, ಹೆಗ್ಗಪ್ಪ, ಮಾಂತೇಶ, ಮಲ್ಲಿಕಾರ್ಜುನ, ಅರ್ಜುನ್, ಮಾಳಗಿ ಆನಂದಪ್ಪ, ಕಬ್ಬಳ್ಳಿ ಕರಿಯಪ್ಪ, ಜಯಪ್ಪ ಇದ್ದರು.
Leave a comment