ಹರಪನಹಳ್ಳಿ : ನಗರದ ಹಿರಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಕನ್ನಡ ಹಬ್ಬ-2025 ಕಾರ್ಯಕ್ರಮ ಜರುಗಿತು.
ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಚ್.ಚಂದ್ರಶೇಖರ ಮಾತನಾಡಿ, ವ್ಯವಹಾರಿಕವಾಗಿ ಕನ್ನಡ ಬಳಕೆ ಹೆಚ್ಚಾಗುವ ಅಗತ್ಯವಿದೆ. ಉದ್ಯೋಗದ ಕಾರಣಕ್ಕಾಗಿ ಬಹುತೇಕರು ಅನ್ಯಭಾಷೆಗೆ ಮೊರೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್ಯುಜೆಎಂ ಕಾಲೇಜ್ ಕನ್ನಡ ಉಪನ್ಯಾಸಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ಕನ್ನಡಪರವಾದ ಸಂಘಟನೆ, ಕಾರ್ಯಕ್ರಮಗಳಿಂದ ಜನರು ಜಾಗೃತರಾಗಬೇಕು, ಪ್ರಾಥಮಿಕ ಹಂತದಲ್ಲಿ ಕನ್ನಡ ಪ್ರೀತಿಸುವ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ. ಕನ್ನಡದಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿ ಪ್ರತಿಯೊಬ್ಬರ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಕಾಲೇಜಿನ ಪ್ರಾಚಾರ್ಯ ಮುತ್ತೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷ ಬಸವನಗೌಡ, ಗೋವಿಂದಪ್ಪ ಮಾತನಾಡಿದರು. ಉಪನ್ಯಾಸಕರಾದ ರವೀಂದ್ರ, ಮಾಳ್ಗಿ ಮಂಜುನಾಥ, ಪ್ರವೀಣ್ ಕುಮಾರ, ಪ್ರಭಾಕರ, ನವೀನ್ ಇತರರಿದ್ದರು.
