ಹರಪನಹಳ್ಳಿ : ಸಾವಿರಾರು ಕಾರ್ಮಿಕರ ಅನುಕೂಲಕ್ಕಾಗಿ ತಾಲ್ಲೂಕಿನಲ್ಲಿ ಇಎಸ್ಐ ಆಸ್ಪತ್ರೆ ತೆರೆಯಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ ವತಿಯಿಂದ ಕಾರ್ಮಿಕರು ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಹಿರೆಕೆರೆ ವೃತ್ತದಿಂದ ಆರಂಭವಾದ ಪ್ರತಿಭಟನೆ ಡಾ.ಬಿ.ಆರ್.ಅಂಬೇಡ್ಕರ ವೃತ್ತ ತಲುಪಿ, ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು. ನೊಂದಾಯಿತ ಕಾರ್ಮಿಕರ ಕುಟುಂಬಕ್ಕೆ ನಿವೇಶನ ಸಹಿತ ಮನೆ ಕಟ್ಟಿಸಿಕೊಡಬೇಕು. ಹಡಗಲಿ, ಕೊಟ್ಟೂರು ತಾಲ್ಲೂಕು ಒಳಗೊಂಡು ಇಎಸ್ಐ ಆಸ್ಪತ್ರೆ ಹರಪನಹಳ್ಳಿಯಲ್ಲಿ ಸ್ಥಾಪಿಸಬೇಕು. ಕಾರ್ಮಿಕರಿಗೆ ಕಿಟ್ ಕೊಡುವ ಬದಲು ನೇರವಾಗಿ ಡಿಬಿಟಿ ಮೂಲಕ ಖಾತೆಗೆ ರೂ.3600 ಪಾವತಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಪ್ರತಿ 5 ವರ್ಷಕ್ಕೊಮ್ಮೆ ನವೀಕರಣ ನಿಯಮ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ಕಾರ್ಮಿಕ ನಿರೀಕ್ಷಕ ಪ್ರಕಾಶ ಗೌಡ ಅವರು ಮನವಿ ಸ್ವೀಕರಿಸಿದರು. ಮುಖಂಡರಾದ ಸಂದೇರ ಪರಶುರಾಮ್, ಗುಳೇದಹಟ್ಟಿ ಸಂತೋಷ್, ಹುಲಿಕಟ್ಟೆ ಮೈಲಪ್ಪ, ಮಹಮ್ಮದ್ ರಫಿ, ಬಾಲ ಗಂಗಾಧರ, ಇಬ್ರಾಹಿಂ ಸಾಬ್, ಬಾಗಳಿ ರೇಣುಕಮ್ಮ, ಕಲೀಂ, ರಾಮಣ್ಣ, ಮಂಜು, ಜೋಗಿನ ನಾಗರಾಜ್, ಮೋಹನ್ ಕುಮಾರ, ವಿನಯ್, ಪ್ರಕಾಶ, ಕೃಷ್ಣಕುಮಾರ, ಕೆ.ಅಂಜಿನಿ, ರಾಘವೇಂದ್ರ ಇದ್ದರು.
Leave a comment