ಹರಪನಹಳ್ಳಿ : ಗ್ರಾಮೀಣ ಭಾಗದ ಪತ್ರಕರ್ತರನ್ನು ಸದೃಢಗೊಳಿಸುವ ಸದುದ್ದೇಶದಿಂದ ಈಚೆಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿ (ರಿ)ಗೆ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ರಾಜ್ಯ ಸರ್ಕಾರ ನೌಕರರ ಸಂಘದ ಹರಪನಹಳ್ಳಿ ತಾಲ್ಲೂಕು ಸಮಿತಿ ಹಾಗೂ ವಿವಿಧ ಸಂಘಟನೆಗಳು ಶುಕ್ರವಾರ ಸನ್ಮಾನಿಸಿ, ಪ್ರೋತ್ಸಾಹ ನೀಡಿದರು.
ಸಮತಾ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಪ್ರೌಢಶಾಲೆ ಸಹಶಿಕ್ಷಕರ ಸಂಘ, ಸಮತಾ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭವನ್ನು ಉದ್ಘಾಟಿಸಿದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ ಅವರು, ‘ಸಂಘವನ್ನು ಅಸ್ತಿತ್ವಕ್ಕೆ ತರುವುದು ಬಹಳ ಸುಲಭ, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರದ್ದು. ಎಲ್ಲ ಸದಸ್ಯರು ಪರಸ್ಪರ ಒಗ್ಗಟ್ಟಿನಿಂದ ಸಂಘದ ಶ್ರೇಯಸ್ಸಿಗೆ ಶ್ರಮಿಸಿ. ಒಳ್ಳೆಯದನ್ನು ಮಾಡುವ ಸಂಕಲ್ಪ ಮಾಡಿರುವ ತಮ್ಮ ತಂಡಕ್ಕೆ ಜಯ ದೊರಕಲಿ ಎಂದು ಶುಭಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸತ್ಯಕ್ಕೆ ದೂರವಾಗಿರುವ ಸುದ್ದಿಗಳಿಂದ ಪತ್ರಕರ್ತರು ದೂರವಿರಬೇಕು. ಸಮಾಜ ಮತ್ತು ಸರ್ಕಾರದ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡುವ ಗುಣವನ್ನು ಪತ್ರಕರ್ತರು ರೂಡಿಸಿಕೊಳ್ಳಬೇಕು. ಶೋಷಿತರ ಧ್ವನಿಯಾಗಿ ವರದಿಗಳನ್ನು ಬಿತ್ತರಿಸಿ, ಆಳುವ ಸರ್ಕಾರಗಳ ಕಣ್ತೆರೆಸುವ ನಿಟ್ಟಿನಲ್ಲಿ ವರದಿಗಾರಿಕೆಗೆ ಒತ್ತುಕೊಡಬೇಕು. ಜೊತೆಗೆ ದಿಟ್ಟತನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಮಿತಿ ಗೌರವ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತಿನಲ್ಲಿ ವಿಶ್ವಾಸವಿಟ್ಟು, ನಾವೆಲ್ಲರೂ ಇತರೆ ಸಂಘ, ಸಂಸ್ಥೆಗಳೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಹೋಗುತ್ತೇವೆ. ಎಲ್ಲ ಇಲಾಖೆಯ ಅಧಿಕಾರಿಗಳ ಜೊತೆಗೆ ಸೌಜನ್ಯ, ವಿಶ್ವಾಸದಿಂದ ಇರುತ್ತೇವೆ. ಪತ್ರಕರ್ತರ ಜವಾಬ್ದಾರಿಗಳಿಗೆ ದಕ್ಕೆಯಾಗದ ರೀತಿಯಲ್ಲಿ ಕೆಲಸ ಮಾಡಲು ನಮ್ಮ ತಂಡ ನಿರ್ಧರಿಸಿದೆ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಮಿತಿ ಅಧ್ಯಕ್ಷ ಎ.ನಾಗೇಂದ್ರಪ್ಪ ಮಾತನಾಡಿ, ಸಮಾಜದಲ್ಲಿರುವ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಸಮಾನವಾಗಿ ವರದಿ ಬಿತ್ತರಿಸಬೇಕು. ಯಾವುದೇ ಇಲಾಖೆಗಳಿಗೆ ನೋವಾಗದ ರೀತಿಯಲ್ಲಿ ವರದಿ ಪಡೆದು ಬಿತ್ತರಿಸುತ್ತೇವೆ. ತಪ್ಪು ಮಾಡಿದ್ದರೆ ನಮ್ಮ ವರದಿಗಳ ಮೂಲಕ ಖಂಡಿಸುತ್ತೇವೆ ಎಂದು ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಮಿತಿ ಉಪಾಧ್ಯಕ್ಷ ಪಟ್ನಾಮದ ವೆಂಕಟೇಶ್ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗ ಪತ್ರಿಕೋದ್ಯಮ ಕ್ಷೇತ್ರ ಅತ್ಯಂತ ಶ್ರೇಷ್ಠವಾಗಿದೆ. ಇಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಹೆಮ್ಮೆ ಪಡಬೇಕು. ಸಮಾಜ ಮತ್ತು ಸರ್ಕಾರದ ನಡುವೆ ಸೇತುವೆಯಾಗಿರುವ ಪತ್ರಕರ್ತರ ಕೆಲಸಕ್ಕೆ ಸೂಕ್ತ ಭದ್ರತೆ ಇಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.
ಸರ್ಕಾರಿನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಷರೀಫ್, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಟಿ.ಎಚ್.ಎಂ.ಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಮ್ಮತ್ತರ ಅಂಜಿನಪ್ಪ, ತಾಲ್ಲೂಕು ಉಪಾಧ್ಯಕ್ಷ ಸಂಗಯ್ಯ, ಶಿಕ್ಷಕರಾದ ವೀರಪ್ಪ, ಪಿ.ಸುಬ್ಬಣ್ಣ, ಇಸ್ಮಾಯಿಲ್, ಗಿರಿರಾಜ್ ಅವರುಗಳು ಎಲ್ಲ ಪದಾಧಿಕಾರಿಗಳಿಗೆ ಶುಭಕೋರಿದರು.
ಸರ್ಕಾರಿ ನೌಕರರ ಸಂಘದ ಜಮಾಲುದ್ದಿನ್, ನಾಗಪ್ಪ, ಶೋಭಾಕುಮಾರಿ, ಹುಸೇನ್ ಭಾಷ, ಜಿ.ಕರಿಬಸಪ್ಪ, ಪತ್ರಕರ್ತರ ಸಮಿತಿಯ ಡಿ.ವಿಶ್ವನಾಥ, ಬಿ.ವೈ.ದುರುಗೇಶ್, ಎ.ವೆಂಕಟರಾಜು, ನಾಗಭೂಷಣ, ಎ.ಮಂಜುನಾಥ, ಕವಸರ ಬಸವರಾಜ, ದೊಡ್ಡಬಸವರಾಜ, ಶಬ್ಬೀರ, ರುದ್ರಮುನಿ, ಮೈಲಾರಿ, ಹುಲಿಯಪ್ಪನವರ್ ಬಸವರಾಜ, ತಿರುಮಲ, ಕುಂಬಾರ ಬಸವರಾಜ, ಅಶೋಕ, ಚಿಗಟೇರಿ ಪರಶುರಾಮ, ಶಶಿಕುಮಾರ, ಎಲ್.ಪ್ರಕಾಶನಾಯ್ಕ, ಹುಲಿರಾಜ್ ಸೇರಿದಂತೆ ಅನೇಕರು ಇದ್ದರು.
Leave a comment