ಹರಪನಹಳ್ಳಿ: ಮೊಬೈಲ್ಗೆ ಹೇಗೆ ನೆಟ್ವರ್ಕ್ ಟವರ್ ಮುಖ್ಯವೋ, ಹಾಗೆಯೇ ದೇವಸ್ಥಾನದ ಗೋಪುರಕ್ಕೆ ಕಳಸ ಬಹುಮುಖ್ಯ, ದೇವಸ್ಥಾನಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಬೆಳೆಸುವ ಶಕ್ತಿ ಕೇಂದ್ರಗಳಾಗಿವೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಅಡವಿಹಳ್ಳಿ ಗ್ರಾಮದಲ್ಲಿ ಸೋಮಾರ ಹಮ್ಮಿಕೊಂಡಿದ್ದ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಬಸವೇಶ್ವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಹಾಗೂ ಧರ್ಮ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಗೋಪುರದ ಮೇಲಿರುವ ಕಳಸವು ದೇವಸ್ಥಾನದ ಪವಿತ್ರ ಶಕ್ತಿಯ ಸಂಕೇತ. ಭಗವಂತನ ದಿವ್ಯ ಶಕ್ತಿಯು ಈ ಕಳಸದ ಮೂಲಕ ಇಡೀ ಊರಿಗೆ ಹರಡುತ್ತದೆ ಮತ್ತು ಪ್ರಕೃತಿಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗ್ರಾಮಸ್ಥರು ಪ್ರತಿದಿನ ದೇವರ ಸ್ಮರಣೆ ಮಾಡಬೇಕು. ಭಗವಂತನನ್ನು ಅರಿತಾಗ ಮಾತ್ರ ಅರಿವಿನ ನಿಜವಾದ ಜ್ಞಾನ ಉಂಟಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಅಡವಿಹಳ್ಳಿಯ ಸದ್ಗುರು ಶಿವಯೋಗಿ ವೀರ ಗಂಗಾಧರ ಹಾಲಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ರಾಜ್ಯ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಿ.ನಂಜನಗೌಡ, ದೇವಸ್ಥಾನ ಸಮಿತಿ ಅಧ್ಯಕ್ಷ ಎ.ಜೆ.ಮಂಜುನಾಥ ಗೌಡ, ಉಪಾಧ್ಯಕ್ಷ ಹಾವನೂರು ಹಾಲಪ್ಪ, ಮಲ್ಲಿಕಾರ್ಜುನ ಕಲ್ಮಠ, ಕರಿಬಸವರಾಜ, ಓಂಕಾರಗೌಡ, ಸುರೇಶ, ಪಿ.ಅರುಣ್ ಕುಮಾರ, ಪ್ರಧಾನ ಕಾರ್ಯದರ್ಶಿ ಗುಬ್ಬವ್ವರ ಪೂಜಾರ್ ಬಸವರಾಜ, ಖಜಾಂಚಿ ಬಿ.ಜಿ. ಶರಣಪ್ಪ, ಸಹ ಕಾರ್ಯದರ್ಶಿ ನಿಂಬಳಗೇರಿ ಬಸವರಾಜ ಇದ್ದರು.
Leave a comment