ಹರಪನಹಳ್ಳಿ : ಬಸವಣ್ಣನವರ ಆಶಯದಂತೆ ಹಿಂದೂಗಳೆಲ್ಲರೂ ಜಾತಿ ತಾರತಮ್ಯ ಬಿಟ್ಟು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವ ಜಾಗೃತಿ ಮೂಡಿಸಲು ದೇಶಾಧ್ಯಂತ ಹಿಂದೂ ಸಮ್ಮೇಳನ ನಡೆಯುತ್ತಿವೆ ಎಂದು ಬೆಂಗಳೂರು ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ್ ತಿಳಿಸಿದರು.
ನಗರದ ಹಳೆ ಬಸ್ ನಿಲ್ದಾಣದಲ್ಲಿ ಶುಕ್ರವಾರ ಹಿಂದೂ ಸಮ್ಮೇಳನ ಸಮಿತಿ ಆಯೋಜಿಸಿದ್ದ ‘ಹಿಂದೂ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೊಳ್ಲಿ ರಾಯಣ್ಣ, ಬಸವಣ್ಣ, ರಾಣಿ ಚೆನ್ನಮ್ಮ, ಅಂಬೇಡ್ಕರ ಅಂತಹ ಆದರ್ಶರನ್ನು ಜಾತಿಗೆ ಸೀಮಿತಗೊಳಿಸುವುದು ನಿಲ್ಲಬೇಕು. ಮೌಲ್ಯಯುತ ಕುಟುಂಬ ಉಳಿಸಬೇಕಾಗಿದೆ. ನೀರು, ಪರಿಸರ ಉಳಿಸಿ, ಪ್ಲಾಸ್ಟಿಕ್ ಮುಕ್ತ ಭಾರತ ಕಟ್ಟುವ ಗುರಿ ನಮ್ಮದಾಗಬೇಕು ಎಂದರು.
ಅಸ್ಪೃಶ್ಯತೆ ಆಚರಣೆ, ಜಾತೀಯತೆ ನಿಲ್ಲಿಸಬೇಕಾಗಿದೆ. ಭಾರತ ವಿಶ್ವಗುರು ಆಗಬೇಕಾದರೆ ಹಿಂದೂಗಳೆಲ್ಲರೂ ಒಂದಾಗುವ ಜರೂರಿದೆ ಎಂದರು. ಬೋಗ ಮೆಟ್ಟಿ, ತ್ಯಾಗ ಮೆರೆದಿರುವ ಏಕೈಕರಾಷ್ಟ್ರ ಇದಾಗಿದೆ. ವಿಭೂತಿ, ತಿಲಕ, ಹೋಮ, ಹವನಗಳು ಧರ್ಮವಲ್ಲ.ಇನ್ನೊಬ್ಬರಿಗೆ ಹಿಂಸೆ, ನೋವು ಕೊಡುವುದು ಅಧರ್ಮ.ಪರೋಪಕಾರ, ಒಳ್ಳೆಯ ಕೆಲಸ ಮಾಡುವುದು ಧರ್ಮ ಎಂದು ಅರ್ಥೈಸಿದರು. ರಾಷ್ಟ್ರದಲ್ಲಿ ನೂರಾರು ಮತಗಳಿವೆ. ಯಾವುದಕ್ಕೆ ಆದಿ, ಅಂತ್ಯವಿಲ್ಲವೋ ಅದೇ ಹಿಂದೂ ಧರ್ಮ. ಇದು ಕೋಮುವಾದ ಎಂದು ಕೆಲವರು ಅಪಾರ್ಥ ಮಾಡುತ್ತಾರೆ. ಇದನ್ನು ಹೊಡೆದು ಹಾಕಲು ವಿದೇಶಿ ಷಡ್ಯಂತ್ರ ಕೆಲಸ ಮಾಡುತ್ತಿವೆ. ಹಿಂದೂ ಧರ್ಮ ಎಂದಿಗೂ ಕೋಮುವಾದಿ ಆಗಲು ಸಾಧ್ಯವಿಲ್ಲ. ಒಳ್ಳೆಯ ಕೆಲಸಕ್ಕಾಗಿ ಜಾತಿ , ಪಂಥ ಬಿಟ್ಟು ಹಿಂದೂ ಧರ್ಮ ಉಳಿಸಲು ಎಲ್ಲರೀ ಕೈ ಜೋಡಿಸಿ ಎಂದು ಸಲಹೆ ನೀಡಿದರು.

ಸಾನ್ನಿಧ್ಯವಹಿಸಿದ್ದ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ, ಪಾಶ್ಚಿಮಾತ್ಯ ಸಂಸ್ಕೃತಿ ನಿಲ್ಲಿಸಿ, ಮಕ್ಕಳಿಗೆ ದೇಸಿ ಸಂಸ್ಕೃತಿ ಕಲಿಸಬೇಕಾಗಿದೆ. ಮನಸ್ಸೇ ದೇವಾಲಯ ಎಂದು ಕರೆದಿರುವುದು ಹಿಂದೂ ಧರ್ಮ ಮಾತ್ರ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಪಾಟೀಲ್ ರಾಮನಗೌಡ, ಧಾರವಾಹಿಯಲ್ಲಿ ಪ್ರಸಾರ ಆಗುವ ಕಥೆಗಳು ನಮ್ಮ ಸಂಸ್ಕೃತಿ ಅಲ್ಲ. ಹಿಂದೂಧರ್ಮದ ದೇಸಿ ಸಂಸ್ಕೃತಿ, ಸಂಸ್ಕಾರವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕಿದೆ ಎಂದರು. ಬೆಳಿಗ್ಗೆ ಬಿಜೆಪಿ ಪಕ್ಷದ ಮುಖಂಡರು ಬೈಕ್ ರ್ಯಾಲಿ ನಡೆಸಿದರು. ಮದ್ಯಾಹ್ನ 3 ಗಂಟೆಗೆ ಬಸವೇಶ್ವರ ವೃತ್ತದಿಂದ ಆರಂಭವಾದ ಭಾರತಾಂಬೆ ಭಾವಚಿತ್ರದ ಮೆರವಣಿಗೆಗೆ ಡೊಳ್ಳು ಕುಣಿತ, ಕೋಲಾಟ, ಸಮ್ಮಾಳ, ನಂದಿಕೋಲು ಕಲಾತಂಡಗಳು ಮೆರುಗು ನೀಡಿದವು.ಅನೇಕ ಮುಖಂಡರು ಮೆರವಣಿಗೆಯಲ್ಲಿ ಸಾಗಿದರು.
ಅವನಿ ಮತ್ತು ತಂಡದ ಭರತನಾಟ್ಯ, ರೇಖಾ ಕೊಟ್ರೇಶ್ ಗೀತೆ ಹಾಗೂ ಲಂಬಾಣಿ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆದವು. ಸಮಿತಿ ಕಾರ್ಯದರ್ಶಿ ಎಚ್.ಎ.ಸುರೇಂದ್ರ ಬಾಬು, ಉಪಾಧ್ಯಕ್ಷ ಕೆ.ಸಿ.ಗಂಗಾಧರ ವೇದಿಕೆಯಲ್ಲಿದ್ದರು.
Leave a comment