ಹರಪನಹಳ್ಳಿ : ದಲಿತರೆ ಪ್ರಧಾನ ಅರ್ಚಕರಾಗಿರುವ ತಾಲ್ಲೂಕಿನ ಅರಸೀಕೆರೆ ಗ್ರಾಮದ ದಂಡಿನ ದುರುಗಮ್ಮ ದೇವಿ ಜಾತ್ರೆ ಶುಕ್ರವಾರ ಆರಂಭಗೊಂಡಿದೆ.
ಮುಖ್ಯ ರಸ್ತೆಯಿಂದ ದೇವಸ್ಥಾನದ ವರೆಗೆ, ಪ್ರಮುಖ ರಸ್ತೆಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯುತ್ತಿದೆ. ಶುಕ್ರವಾರ ಬೆಳಿಗ್ಗೆ ದೇವಸ್ಥಾನದಲ್ಲಿ ದೇವಿಗೆ ಹೂವಿನ ಅಲಂಕಾರ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೆ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ, ದೇವಿ ದರ್ಶನ ಪಡೆದರು. ನೂರಾರು ಭಕ್ತರು ಹಾಲು, ಮೊಸರು ತಂದು ದೇವಿಗೆ ಹರಕೆ ಸಲ್ಲಿಸಿ, ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಜ.5ರ ಶನಿವಾರ ದೇವಸ್ಥಾನದಲ್ಲಿ ದೇವಿ ದರ್ಶನ, ಜ.6ರ ಭಾನುವಾರ ಬೆಳಗಿನ ಜಾವ ಮುಖ್ಯ ಪೂಜಾರಿ ಪೂಜಾರ ಸಂತೋಷ್ ನೇತೃತ್ವದಲ್ಲಿ ಕೇಲುದಾರಿ ದಲಿತ ಪೂಜಾರಿಗಳು ಮತ್ತು ದುರ್ಗೆಯರು ಗಂಗೆಪೂಜೆ ನೆರವೇರಿಸಿ ದೇವಸ್ಥಾನಕ್ಕೆ ಪಾದಯಾತ್ರೆ ಹೊರಡುತ್ತಾರೆ. ಈ ವೇಳೆ ಅಂದಾಜು ಒಂದುವರೆ ಕಿ.ಮೀ. ಉದ್ದಕ್ಕೂ ಭಕ್ತರು ರಸ್ತೆಯಲ್ಲಿ ಮಲಗುತ್ತಾರೆ, ಆ ಭಕ್ತರ ಮೇಲೆ ದಲಿತ ಅರ್ಚಕರು ನಡೆದುಕೊಂಡು ಹೋಗುತ್ತಾರೆ. ಈ ವೇಳೆ ಪಾದಸ್ಪರ್ಶಿಸಿಕೊಂಡ ಭಕ್ತರು ಸಂತೃಪ್ತಿ ವ್ಯಕ್ತಪಡಿಸುತ್ತಾರೆ. ಅದೇ ದಿನ ಸಂಜೆ ಸರ್ವರೂ ದುರ್ಗಿಯರ ಊಟದಲ್ಲಿ ಪಾಲ್ಗೊಳ್ಳುತ್ತಾರೆ.
ಜಾತ್ರೆ ಹಿನ್ನೆಲೆ
ಹೈದ್ರಾಬಾದ್ ಕರ್ನಾಟಕ ಭಾಗದ ಬಳ್ಳಾರಿಯಲ್ಲಿ ಸಾಂಕ್ರಾಮಿಕ ಕಾಯಿಲೆ ವ್ಯಾಪಕವಾಗಿ ಹರಡಿ ಜೀವ ಸಂಕುಲವನ್ನು ತಲ್ಲಣಗೊಳಿಸಿತ್ತು. ಅರಸೀಕೆರೆ ಗ್ರಾಮದಲ್ಲೂ ಭೀಕರ ಬರಗಾಲ, ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡಿದ್ದವು. ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಆಗ ಗ್ರಾಮದ ಈಡಿಗರ ಲಚ್ಚಮ್ಮ ಎಂಬ ಮಹಿಳೆ ಓಲೆ ಬರೆದು ಪರಿಶಿಷ್ಟ ಜಾತಿಗೆ ಸೇರಿದ ಮರಿಯಜ್ಜ ಎಂಬಾತನ ಕೈಗೆ ಕೊಟ್ಟು ಬಳ್ಳಾರಿ ಅರಸರಿಗೆ ತಲುಪಿಸಲು ತಿಳಿಸಿದ್ದರು.
ಮರಿಯಜ್ಜ ರಾಜರಿಗೆ ಪತ್ರ ತಲುಪಿಸಿ, ದಾರಿಯ ಮದ್ಯೆ ಬಿದ್ದಿದ್ದ ಕಟ್ಟಿಗೆ ಹೊತ್ತು ಹಿಂತಿರುಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಟ್ಟಿಗೆ ಭಾರವಾಯಿತು. ದೇವಿ ಪ್ರತ್ಯಕ್ಷಳಾಗಿ ನಾನು ಬಳ್ಳಾರಿ ದುರ್ಗಮ್ಮ, ನನ್ನನ್ನು ನಿಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗು, ಆ ಊರಿನವರು ಕ್ಷಾಮ ಮುಕ್ತರಾಗುತ್ತಾರೆ ಎಂದು ಆದೇಶವಿತ್ತಳು.
ಅಚ್ಚರಿಪಟ್ಟ ಮರಿಯಜ್ಜ ದುರುಗಮ್ಮ ದೇವಿಯನ್ನು ಹೊತ್ತು ತಂದು ಅರಸೀಕೆರೆ ಮಾದಿಗರ ಕಾಲೊನಿಯಲ್ಲಿ ಪ್ರತಿಷ್ಟಾಪಿಸಿದ. ಇದು ಪುರಾಣ, ಪ್ರವಚನಗಳಲ್ಲಿ ದಾಖಲಾಗಿದೆ. ಅಂದಿನಿಂದ ಅರಸೀಕೆರೆ ಮಾತ್ರವಲ್ಲದೇ ಸುತ್ತ ಹಳ್ಳಿಯ ಜನರು ಸರ್ವ ಜನಾಂಗದವರು ದಂಡಿನ ದುರುಗಮ್ಮ ಮತ್ತು ಮರಿಯಜ್ಜ ಇಬ್ಬರನ್ನು ಪೂಜಿಸುತ್ತಾ ಪೂಜಿಸುತ್ತಾರೆ. ಮೈ ನಡುಗುವ ಚಳಿ ಲೆಕ್ಕಿಸದ ಭಕ್ತರು ಎತ್ತಿನ ಬಂಡಿ, ಟ್ರಾಕ್ಟರ್ ಗಳಲ್ಲಿ ಆಗಮಿಸಿ ದೇವಿ ದರ್ಶನ ಪಡೆದು ತೆರಳುತ್ತಾರೆ ಎಂದು ದಲಿತ ಕಾಲೊನಿಯ ಮುಖಂಡ ಪೂಜಾರ ಮರಿಯಪ್ಪ ಹೇಳಿದರು.
Leave a comment