ಚಿತ್ರದುರ್ಗ: ನಗರದ ಸಮೀಪದ ದಂಡಿನ ಕುರುಬರಟ್ಟಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಹಾಗೂ ವಿಶೇಷ ವಾರ್ಷಿಕ ಶಿಬಿರವನ್ನು ಆಯೋಜಿಸಲಾಗಿತ್ತು.
ಉದ್ಘಾಟಿಸಿದ ಕನ್ನಡ ಉಪನ್ಯಾಸಕ ಮಹಂತೇಶ ಹೆಚ್.ಪಿ. ಅವರು, “ಬಡವರ ಶೋಷಣೆ ತಪ್ಪಿಸಲು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿ. ಜೊತೆಗೆ ಪರಿಸರ ಸಂರಕ್ಷಣೆ ಹಾಗೂ ಮಾತೃಭಾಷೆಗೆ ಒತ್ತು ನೀಡಿ” ಎಂದು ಕರೆ ನೀಡಿದರು. ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ಎಚ್.ಕೆ.ಎಸ್. ಸ್ವಾಮಿ ಅವರು ಚರಕದಿಂದ ನೂಲು ತೆಗೆಯುವ ಪ್ರಾತ್ಯಕ್ಷಿಕೆ ನೀಡಿ, “ವಿದ್ಯಾರ್ಥಿಗಳು ಗ್ರಾಮಗಳ ಸಮಸ್ಯೆ ಅರಿತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು ಹಾಗೂ ಗಾಂಧೀಜಿಯವರ ಚರಕದಂತಹ ಸ್ವಾವಲಂಬಿ ಬದುಕಿಗೆ ಮರಳಬೇಕು” ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಸತೀಶ್ ಗೌಡ ಎಸ್.ಎನ್. ಅವರು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಯುವ ಮಹತ್ವವನ್ನು ವಿವರಿಸಿದರು. ಮುಂಜಾನೆ ಗ್ರಾಮಸ್ಥರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಹಾಗೂ ರಾತ್ರಿ ದೇಶಾಭಿಮಾನ ಮೂಡಿಸುವ ನಿಟ್ಟಿನಲ್ಲಿ ದೀಪೋತ್ಸವ ಆಚರಿಸಲಾಯಿತು. ಎನ್ಎಸ್ಎಸ್ ಅಧಿಕಾರಿಗಳಾದ ನಾಗರಾಜ್, ಸುನಿಲ್, ಡಾ. ರಾಜೇಶ್ವರಿ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Leave a comment