ಹರಪನಹಳ್ಳಿ : ಸರ್ವರಿಗೂ ಸಮಾನ ಶಿಕ್ಷಣ ದೊರೆತಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಇನ್ ಸೈಟ್ ಸಂಸ್ಥೆ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ ಹೇಳಿದರು.
ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ತಾಲೂಕು ಕನಕ ನೌಕರರ ಸಂಘ, ತಾಲ್ಲೂಕು ಬೀರೇಶ್ವರ ಕುರುಬ ಸಂಘ ಹಾಗೂ ಕನಕ ಯುವ ಘಟಕ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ದಾಸ ಶ್ರೇಷ್ಠ ಭಕ್ತ ಕನಕದಾಸರ 539ನೇ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದನ್ನು ಸುಧಾರಣೆ ಮಾಡಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕೆಪಿಎಸ್ ಸಿ ಸುಧಾರಣೆ ಆಗುವ ಬಯಕೆಯಿಂದ ನಾನು ರಾಜಕೀಯಕ್ಕೆ ಬಂದಿರುವೆ. ಇದು ಸುಧಾರಿಸಿದರೆ, ಪ್ರತಿ ವರ್ಷ ಲಕ್ಷಾಂತರ ಅರ್ಹರಿಗೆ ಕೆಲಸ ಸಿಗುತ್ತದೆ ಎಂದರು.
ಕುರುಬ ಸಂಘದ ರಾಜ್ಯ ಹಿರಿಯ ರಾಜ್ಯ ಉಪಾಧ್ಯಕ್ಷ ಎಚ್.ಬಿ.ಪರಶುರಾಮಪ್ಪ ಮಾತನಾಡಿ, ಎಲ್ಲ ಸಮಾಜದ ಮುಖಂಡರು ಒಳಗೊಂಡು ಮಾಡುವ ಇಂತಹ ಕಾರ್ಯಕ್ರಮಗಳು ಕನಕದಾಸರ ಕೀರ್ತನೆಯಂತೆ ಸಾಮರಸ್ಯದ ಸಂದೇಶ ಸಾರುತ್ತವೆ ಎಂದರು.
ಕನಕ ನೌಕರರ ಸಂಘದ ಅಧ್ಯಕ್ಷ ಎಂ.ಎಂ.ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬೀರೇಶ್ವರ ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಬಂಡ್ರಿ ಬಿ.ಗೋಣಿಬಸಪ್ಪ, ನೌಕರರ ಸಂಘದ ಗೌರವ ಅಧ್ಯಕ್ಷ ಎಸ್. ರಾಮಪ್ಪ, ವಕೀಲ ಬಸವರಾಜ ಹುಲಿಯಪ್ಪನವರ್, ಬಸವರಾಜ ಸಂಗಪ್ಪನವರ್ ಮಾತನಾಡಿದರು. ಕುರುಬ ಸಮಾಜದ ಬಸವರಾಜಪ್ಪಮತ್ತು ನಿವೃತ್ತ ಶಿಕ್ಷಕ ದುರುಗಪ್ಪ ಅವರಿಗೆ ಕನಕ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಎಚ್.ವಸಂತಪ್ಪ, ಬಳಿಗನೂರು ಪರಶುರಾಮ, ಮುತ್ತಿಗಿ ಜಂಬಣ್ಣ, ಮೈದೂರು ಮಲ್ಲಿಕಾರ್ಜುನ, ಭರತೇಶ, ಯಲ್ಲಮ್ಮ, ಪ್ರಭಾಕರ, ವೆಂಕಟೇಶ ಬಾಗಲಾರ, ನಂದೀಶಬಾಬು ಇತರರಿದ್ದರು.
Leave a comment