ಹರಪನಹಳ್ಳಿ: ಕಂದಾಯ ಇಲಾಖೆ ಜಾರಿಗೆ ತಂದಿರುವ ಸ್ವಯಂ ಚಾಲಿತ ಮ್ಯೂಟೇಷನ್ ವ್ಯವಸ್ಥೆಯನ್ನು ತಾಲೂಕಿನ ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿ ಬಿ.ವಿ. ಗಿರೀಶ್ ಬಾಬು ಮನವಿ ಮಾಡಿದ್ದಾರೆ.
ಪಟ್ಟಣದ ಕಾಶಿ ಸಂಗಮೇಶ್ವರ ಬಡಾವಣೆಯಲ್ಲಿರುವ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಫೆ. 24ರಂದು ನಡೆಸಿದ ವಿಡಿಯೊ ಸಂವಾದದಲ್ಲಿ ನೀಡಿದ ನಿರ್ದೇಶನದಂತೆ, ಸ್ವಯಂ ಚಾಲಿತ ಮ್ಯೂಟೇಷನ್ ಪ್ರಕ್ರಿಯೆ ಜಾರಿಗೆ ಬಂದಿದೆ. ನೊಂದಣಿಯಾದ ಕ್ರಯ, ವಿಭಾಗ, ದಾನ ಸೇರಿದಂತೆ ವಿವಿಧ ಹಕ್ಕುಬದಲಾವಣೆ ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು ನೋಂದಣಿಯಾದ ಬಳಿಕ ಏಳು ದಿನಗಳೊಳಗೆ ಯಾವುದೇ ತಕರಾರು ದಾಖಲಾಗದಿದ್ದರೆ, ಪ್ರತ್ಯೇಕ ಅನುಮೋದನೆಯ ಅಗತ್ಯವಿಲ್ಲದೆ ಮ್ಯೂಟೇಷನ್ ಸ್ವಯಂ ಅಂಗೀಕಾರವಾಗಲಿದೆ ಎಂದು ವಿವರಿಸಿದರು.
ಈ ವ್ಯವಸ್ಥೆಯಿಂದ ರೈತರಿಗೆ ಕಚೇರಿಗಳ ಸುತ್ತಾಟ ಕಡಿಮೆಯಾಗಲಿದ್ದು, ಹಕ್ಕುಬದಲಾವಣೆ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳಲಿದೆ. ಜೊತೆಗೆ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿರುವುದರಿಂದ ಅನಧಿಕೃತ ಹಕ್ಕು ಬದಲಾವಣೆಗಳನ್ನು ತಡೆಹಿಡಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇನ್ನೂ ಆಧಾರ್ ಜೋಡಣೆ ಮಾಡಿಸದ ಖಾತೆದಾರರು ತಮ್ಮ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಸಬಾ, ಅರಸೀಕೆರೆ, ಚಿಗಟೇರಿ ಹಾಗೂ ತೆಲಿಗಿ ಹೋಬಳಿಗಳ ಕಂದಾಯ ನಿರೀಕ್ಷಕರಾದ ರಾಘವೇಂದ್ರ ರಾವ್, ನನ್ಯಾಸಾಬ್, ಪ್ರಭಾಕರ್ ಹಾಗೂ ನಾಗರಾಜ್ ಉಪಸ್ಥಿತರಿದ್ದರು.
Leave a comment