ಹರಪನಹಳ್ಳಿ : ಕೂಡ್ಲಿಗಿ ತಾಲ್ಲೂಕು ಪೂಜಾರಹಳ್ಳಿ ಪಂಚಾಯಿತಿ ವ್ಯಾಪ್ತಿಯ ತಿಪ್ಪೆಹಳ್ಳಿ ಹತ್ತಿರ ಹರಿಯುವ ಚಿನ್ನಹಗರಿ ನದಿ ಮ್ಯಾಸಬುಡಕಟ್ಟು ಸಂಸ್ಕೃತಿ ನೆಲೆಯಾಗಿದ್ದು, ಆ ಸ್ಥಳದಲ್ಲಿ ಜ.15ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ತನಕ ‘ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ -2026’ ಹಮ್ಮಿಕೊಳ್ಳಲಾಗಿದೆ ಎಂದು ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ದೊಡ್ಡಮನಿ ಪ್ರಸಾದ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಚಿನ್ನಹಗರಿ ಉತ್ಸವದ ಭಿತ್ತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಶತಮಾನಗಳಿಂದ ಜಗಳೂರು ತಾಲ್ಲೂಕಿನ ತೊರೆಸಾಲು ಪ್ರದೇಶದಿಂದ ಕೂಡ್ಲಿಗಿ,ಮೊಳಕಾಲ್ಮೂರು ತಾಲ್ಲೂಕು ಮೂಲಕ ಹರಿಯುತ್ತಿರುವ ಚಿನ್ನಹಗರಿ ನದಿ ಮ್ಯಾಸಬುಡಕಟ್ಟು ಸಂಸ್ಕೃತಿಯ ನೆಲೆಯಾಗಿದೆ ಎಂದರು.
ಸಮಿತಿ ಅಧ್ಯಕ್ಷ ಗೆರೆಗಲ್ ಪಾಪಯ್ಯ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯು ಬುಡಕಟ್ಟು ಪರಂಪರೆಯು ಭಾಗವಾಗಿ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿ ಸಂರಕ್ಷಣಾ ಸಮಿತಿ, ಚಿನಹಗರಿ ಪ್ರಕಾಶನ, ಗಾದ್ರಿ ಪಾಲನಾಯಕ ದೇವಸ್ಥಾನ ಅಭಿವೃದ್ದಿ ಸಮಿತಿ ಸಹಯೋಗದಲ್ಲಿ ಆದಿವಾಸಿ ಮ್ಯಾಸನಾಯಕರ ಚಿನ್ನ ಹಗರಿ ಉತ್ಸವ ಜರುಗಲಿದೆ.
ಮ್ಯಾಸನಾಯಕ ಬುಡಕಟ್ಟಿನ ಅನನ್ಯ ಲಕ್ಷಣಗಳನ್ನು ಸಂರಕ್ಷಿಸಿಕೊಂಡು ಹೋಗುವುದು ಉತ್ಸವದ ಮುಖ್ಯ ಧ್ಯೇಯ. ನಮ್ಮ ಬುಡಕಟ್ಟು ಅಸ್ಮಿತೆಯನ್ನು ನಾಶಮಾಡಲು ಅನ್ಯ ಜಾತಿಯವರು ನುಸುಳಿದ್ದಾರೆ ಮತ್ತು ಮೀಸಲಾತಿ ಕದಿಯುತ್ತಿದ್ದಾರೆ. ಇದರ ಬಗ್ಗೆ ಮ್ಯಾಸ ನಾಯಕ ಬಂಧುಗಳನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದರು. ಮ್ಯಾಸ ಮಂಡಲ ಪೂಜಾರಿಗಳು ಮತ್ತು ಕಿಲಾರಿಗಳು ಚಿನ್ನಹಗರಿ ಉತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ಮೊಳಕಾಲ್ಮೂರು ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ, ಉಪಾಧ್ಯಕ್ಷ ಸಿ.ಎಸ್.ಜೋಗೇಶ, ಅನ್ನಪೂರ್ಣಮ್ಮ, ಸಿ.ಬಿ.ನಾಗವೇಣಿ, ವಕೀಲರಾದ ಬಿ.ಕರಿಯಪ್ಪ, ಸಿ.ಹನುಮಂತಪ್ಪ, ಕೆ.ಬಿ.ಓಬಣ್ಣ, ಪಿ.ಮಲ್ಲೇಶ, ಮಂಜುನಾಥ ಕೋನಸಾಗರ, ಮ್ಯಾಸಗೇರಿ ಮುಖಂಡರಾದ ಜಿ.ದಾಳೆಪ್ಪ, ಭಂಗಿ ರಾಘವೇಂದ್ರ, ಭಂಗಿ ಮಾರೇಶ್, ಚಿಕ್ಕೇರಿ ವೈಭವ, ಬಿ.ವೆಂಕಟೇಶ್, ಡಿ.ವೆಂಕಟೇಶ್, ಸುಕುಮಾರಪ್ಪ, ಗೋಣೆಪ್ಪ, ಮಾರಪ್ಪ ಇದ್ದರು.

ಚಿನ್ನಹಗರಿ ಉತ್ಸವದ ಉದ್ದೇಶಗಳು
- ಈ ಉತ್ಸವನ್ನು ಪ್ರತೀ ವರ್ಷ ನಮ್ಮ ಮ್ಯಾಸ ನಾಯಕ ಬಂದುಗಳು, ಹೊಳೆ ಪೂಜೆ ಅಥವಾ ಹೊಳೆಗೆ ದೇವರು ಹೊರಡಿಸುವುದು ಎಂದು ಆಚರಿಸುತ್ತಾ ಬರುತ್ತಿದ್ದರು. ಇದನ್ನೇ ಹಿಂದಿನ ವರ್ಷ, 2025ನೇ ಜನವರಿಯಲ್ಲಿ, ಇದನ್ನು ಒಂದು ವ್ಯವಸ್ಥಿತ ಉತ್ಸವವನ್ನಾಗಿ ಆಚರಿಸಲಾಗಿತ್ತು. ಆದ್ದರಿಂದ, ಈ ಉತ್ಸವವನ್ನು ದಿ:15.01.2026 ರಂದು ಇನ್ನೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದೇವೆ.
- ಮ್ಯಾಸ ನಾಯಕರನ್ನು ಪರಿಶಿಷ್ಟ ಪಂಗಡಕ್ಕೆ ʼನಾಯಕʼ ಎಂಬ ಸಮನಾರ್ಥಕ ಪದ ಅಡಿಯಲ್ಲಿ 1976 ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಾಗ, ನಮ್ಮ ಮ್ಯಾಸ ನಾಯಕ ಬುಡಕಟ್ಟಿಗೂ ಮತ್ತು ನಾಯ್ಕಡ ಬುಡಕಟ್ಟಿಗೂ ಸಾಮ್ಯತೆ ಇರುವ ಬುಡಕಟ್ಟು ಲಕ್ಷಣಗಳನ್ನು ಅಧ್ಯಯನ ಮಾಡಿ ಪರಿಶೀಲಿಸಿ, ಈ ಎರಡೂ ಬುಡಕಟ್ಟುಗಳು ಒಂದೇ ಎಂದು ಭಾರತ ಸಂಸತ್ತು ನಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುತ್ತದೆ. ಆದ್ದರಿಂದ, ಈ ಅನನ್ಯ ಬಡುಕಟ್ಟು ಲಕ್ಷಣಗಳನ್ನು ಸಂರಕ್ಷಸಿಕೊಂಡು ಹೋಗುವುದು ನಮ್ಮ ಈ ಕಾರ್ಯಕ್ರಮದ ಉದ್ಧೇಶವಾಗಿರುತ್ತದೆ.
- ನಮ್ಮ ಬುಡಕಟ್ಟು ಲಕ್ಷಣಗಳನ್ನು ನಾಶಮಾಡಲು, ನಮ್ಮೊಳಗೆ ಅನ್ಯ ಜಾತಿಯವರು ನುಸಿಳಿದ್ದಾರೆ ಮತ್ತು ನಮ್ಮ ಮೀಸಲಾತಿಯನ್ನು ಕದಿಯುತ್ತಿದ್ದಾರೆ. ಇದರ ಬಗ್ಗೆ, ನಮ್ಮ ಮ್ಯಾಸ ನಾಯಕ ಬಂಧುಗಳನ್ನು ಎಚ್ಚರಿಸುವುದು.
- ಮ್ಯಾಸ ನಾಯಕರಾದ ನಾವು, ಮುಖ್ಯವಾಹಿನಿಯಿಂದ ಬೇರೆಯೇ ಮ್ಯಾಸರ ಹಟ್ಟಿಗಳಲ್ಲಿ ವಾಸವಿರುವವರು. ನಮ್ಮದಲ್ಲದ ವೈದಿಕ ಪರಂಪರೆಯಿಂದ ದೂರ ಇದ್ದು, ಉದಿ-ಪದಿ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿರುವವರು. ನಮ್ಮ ಪೂರ್ವಜರ ಅತ್ಮಗಳು ನಮ್ಮ ದೇವರ ಎತ್ತುಗಳಲ್ಲಿ ನೆಲೆಸಿವೆ ಎಂದು ದೇವರ ಎತ್ತುಗಳನ್ನೇ ದೇವರೆಂದು ಪೂಜಿಸುತ್ತಿರುವವರು. ಇದೇ ಧಾರ್ಮಿಕ ನಂಬಿಕೆಯು ನಾಯ್ಕಡ ಪಂಗಡಲ್ಲಿಯೂ ಇರುತ್ತದೆ. ನಮ್ಮ ಮ್ಯಾಸನಾಯಕ ಬಡಕಟ್ಟು ನಾಯ್ಕಡ ಆದಿವಾಸಿ ಜನಾಂಗದಿಂದ ಬೇರ್ಪಟ್ಟು ಈ ಚಿತ್ರದುರ್ಗ, ಮೊಳಕಾಲ್ಮುರು, ಕೂಡ್ಲಿಗಿ ಭಾಗಕ್ಕೆ ಹೇಗೆ ಅಲೆಮಾರಿಗಳಾಗಿ ಬಂದರು ಎಂದು ಸಾಂಸ್ಕೃತಿಕ ಇತಿಹಾಸ ವನ್ನು ನೆನಪಿಸಿಕೊಳ್ಳುವುದು.
- ಇದು ಇಷ್ಟೆಲ್ಲಾ ಸದುದ್ಧೇಶಗಳನ್ನು ಹೊಂದಿರುವ ಬುಡಕಟ್ಟು ಜನರ ಒಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿರುತ್ತದೆ. ಹಾಗಾಗಿ ಆದಿವಾಸಿ ಮ್ಯಾಸ ನಾಯಕರ ಚಿನ್ನಹಗರಿ ಉತ್ಸವ-2026 ರ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ ನೀಡಲಾಯಿತು.
Leave a comment