ಹರಪನಹಳ್ಳಿ: ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿರುವ ಸರ್ಕಾರಿ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಂದ ಪ್ರತಿ ಕ್ವಿಂಟಾಲ್ಗೆ 3 ಕೆ.ಜಿ. ಹೆಚ್ಚುವರಿ ರಾಗಿ ಪಡೆಯಲಾಗುತ್ತಿದೆ ಎಂದು ಆರೋಪಿಸಿ ವಿವಿಧ ಗ್ರಾಮಗಳ ರೈತರು ತಹಶೀಲ್ದಾರ್ ಬಿ.ವಿ. ಗಿರೀಶ್ ಬಾಬು ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರಾಗಿ ಖರೀದಿಯ ಗುತ್ತಿಗೆ ಪಡೆದಿರುವ ಖಾಸಗಿ ಏಜೆನ್ಸಿಯವರು ತೂಕದಲ್ಲಿ ಅಕ್ರಮ ಎಸಗುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ರೈತರೊಂದಿಗೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ರೈತ ಮುಖಂಡ ಎಚ್. ಹನುಮಂತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಪ್ರಮುಖ ಆಗ್ರಹಗಳು:
-
ಪರವಾನಗಿ ರದ್ದು: ನಿರ್ಭೀತಿಯಿಂದ ಅಕ್ರಮದಲ್ಲಿ ತೊಡಗಿರುವ ಖಾಸಗಿ ಏಜೆನ್ಸಿಯ ಗುತ್ತಿಗೆಯನ್ನು ಕೂಡಲೇ ರದ್ದುಪಡಿಸಿ, ಕಾನೂನು ಕ್ರಮ ಜರುಗಿಸಬೇಕು.
-
ಹಣ ಪಾವತಿ: ಇದುವರೆಗೆ ರೈತರಿಂದ ಹೆಚ್ಚುವರಿಯಾಗಿ ಪಡೆದ ರಾಗಿಗೆ ತಕ್ಕ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.
-
ಸಿಸಿಟಿವಿ ಅಳವಡಿಕೆ: ಮುಂದಿನ ದಿನಗಳಲ್ಲಿ ತೂಕದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಖರೀದಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ರೈತರಾದ ಮಹಾಂತೇಶ ನೀಲಗುಂದ, ಕೆಂಚಪ್ಪ, ಅಂಜಿನಪ್ಪ, ಕೋಡಿಹಳ್ಳಿ ಮಲ್ಲಿಕಾರ್ಜುನ, ಗುಳೇದಹಟ್ಟಿ ಸಂತೋಷ, ಕನ್ನವಳ್ಳಿ ಸುರೇಶ, ಪ್ರಭು ಶೃಂಗಾರತೋಟ, ಗಂಗಾನಾಯ್ಕ, ಕಾಳ್ಯನಾಯ್ಕ, ಮಹಮ್ಮದ್ ರಫಿ ಸೇರಿದಂತೆ ಹಲವು ರೈತರು ಉಪಸ್ಥಿತರಿದ್ದರು.
Leave a comment