ಹರಪನಹಳ್ಳಿ: “ಗುಡಿ-ಗುಂಡಾರಗಳನ್ನು ಸುತ್ತುವುದರಿಂದ ನಾವು ಮಾಡಿದ ಕರ್ಮಗಳಿಗೆ ಮೋಕ್ಷ ದೊರೆಯುವುದಿಲ್ಲ. ಬದಲಾಗಿ, ಮುಪ್ಪಿನ ಕಾಲದಲ್ಲಿ ನಮ್ಮ ಮನೆಯಲ್ಲಿರುವ ಹಿರಿಯರನ್ನು ಸರಿಯಾಗಿ ಆರೈಕೆ ಮಾಡಿ, ಅವರನ್ನು ಆನಂದದಿಂದ ಇಟ್ಟರೆ ನಮ್ಮ ಬದುಕು ಸಾರ್ಥಕವಾಗುತ್ತದೆ” ಎಂದು ಹರಪನಹಳ್ಳಿ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಮಾರ್ಮಿಕವಾಗಿ ನುಡಿದರು.
ನಗರದ ಕೊಟ್ಟೂರು ರಸ್ತೆಯಲ್ಲಿ ಶನಿವಾರ ನಡೆದ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಕಛೇರಿ ಕಟ್ಟಡದ ಅಡಿಗಲ್ಲು ಸಮಾರಂಭ ಹಾಗೂ 8ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ನೂತನ ಕಟ್ಟಡಕ್ಕೆ 15 ಲಕ್ಷ ರೂ. ಸಂಸದರ ಅನುದಾನ
ಶಂಕುಸ್ಥಾಪನೆ ನೆರವೇರಿಸಿದ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ನೂತನ ಕಟ್ಟಡ ನಿರ್ಮಾಣಕ್ಕೆ ಸಂಸದರ ಅನುದಾನದಡಿ 15 ಲಕ್ಷ ರೂ. ನೀಡುವ ಭರವಸೆ ನೀಡಿದರು. “ನಮ್ಮ ದೇಶದ ಸನಾತನ ಪರಂಪರೆಯಲ್ಲಿ ಹಿರಿಯರಿಗೆ ಅನಾದಿಕಾಲದಿಂದಲೂ ಪೂಜ್ಯನೀಯ ಗೌರವವನ್ನು ನೀಡುತ್ತಾ ಬಂದಿದ್ದೇವೆ. ಹಿರಿಯರು ಸಮಾಜದ ಜೀವಂತ ಗ್ರಂಥಗಳಿದ್ದಂತೆ. ಅವರ ಜೀವನದ ಅನುಭವ ನಮ್ಮೆಲ್ಲರ ಬದುಕಿನ ಆಶಾಕಿರಣ” ಎಂದು ಸಂಸದೆ ಬಣ್ಣಿಸಿದರು.
ಆಯುಷ್ಮಾನ್ ಭಾರತ್ ಯೋಜನೆ: ಹಿರಿಯರಿಗೆ ವರದಾನ
“70 ವರ್ಷ ವಯೋಮಾನ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯದ ದೃಷ್ಟಿಯಿಂದ 5 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ ಮೀಸಲಿರಿಸಲಾಗಿದೆ. ಮುಪ್ಪಿನ ಕಾಲದಲ್ಲಿ ಸಕ್ಕರೆ ಕಾಯಿಲೆ, ಬಿಪಿ, ದೃಷ್ಟಿ ದೋಷದಂತಹ ಸಮಸ್ಯೆಗಳು ಎದುರಾಗುವುದರಿಂದ ಪ್ರತಿಯೊಬ್ಬರೂ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ನೆಮ್ಮದಿಯ ಬದುಕು ಸಾಗಿಸಬೇಕು” ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ ಕಿವಿಮಾತು ಹೇಳಿದರು.
ನಿವೃತ್ತರಿಗೂ ‘ಆರೋಗ್ಯ ಸಂಜೀವಿನಿ‘ ಯೋಜನೆ?
ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಸದಾನಂದ ನೆಲ್ಕುದ್ರಿ ಮಾತನಾಡಿ, “ಭವಿಷ್ಯದ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ಸರ್ಕಾರಿ ನೌಕರರಿಗೆ ನೀಡುತ್ತಿರುವ ‘ಆರೋಗ್ಯ ಸಂಜೀವಿನಿ’ ಯೋಜನೆಯನ್ನು ನಿವೃತ್ತ ನೌಕರರಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸುತ್ತಿರುವುದು ಸಂತಸದ ವಿಚಾರ” ಎಂದರು.
ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 80 ವರ್ಷ ಮೇಲ್ಪಟ್ಟ ಹಿರಿಯ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ತಾಲ್ಲೂಕು ಅಧ್ಯಕ್ಷ ಶೇಖರಗೌಡ ಪಾಟೀಲ್ , ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಜಿ.ಮನೋಹರ, ನಿವೃತ್ತ ಇಒ ಕೊಟ್ರಯ್ಯ, ಮಕರಬ್ಬಿ ಶರೀಫ್, ಸಾವಿತ್ರಬಾಯಿ ಫುಲೆ ಸಂಘದ ಜಿಲ್ಲಾಧ್ಯಕ್ಷೆ ಟಿ.ಎಚ್.ಎಂ.ಲತಾ, ನಿವೃತ್ತ ನೌಕರರಾದ ಭೀಮಪ್ಪ, ಕೆ ಕೊಟ್ರಪ್ಪ, ಬಸವನಗೌಡ ಎಂ, ಬಸವನಗೌಡ ಎಂ, ಎ ಎಂ ಪ್ರಕಾಶ್, ಎಚ್ ಕೊಟ್ರಪ್ಪ, ಚನ್ನಬಸವನಗೌಡ, ಹನುಮಂತಪ್ಪ, ಮಂಜುನಾಥಚಾರಿ, ವೀರೇಶ ನಾಯ್ಕ, ಧರ್ಮಶೇಖರಪ್ಪ, ಕೆ ಚಂದ್ರಪ್ಪ, ರೇವಣಸಿದ್ದಪ್ಪ, ಬಿ ಶೇಖರಪ್ಪ, ಕೆ ಈಶ್ವರಪ್ಪ, ಸಲಾಂಸಾಬ್ ಇದ್ದರು.
Leave a comment