ಹರಪನಹಳ್ಳಿ : ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿದ್ದ ಸರ್ಕಾರದ ಬೆಂಬಲ ಬೆಲೆ ರಾಗಿ ಖರೀದಿ ಕೇಂದ್ರದ ಏಜೆನ್ಸಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಏಪ್ರಿಲ್ 9ರಂದು ರದ್ದುಪಡಿಸಿ, ರಾಗಿ ಖರೀದಿ ಸ್ಥಗಿತಗೊಳಿಸಿದ್ದನ್ನು ಪ್ರಶ್ನಿಸಿ ರೈತರು ಶುಕ್ರವಾರ ದಿಡೀರ್ ಧರಣಿ ಸತ್ಯಾಗ್ರಹ ನಡೆಸಿದರು.
ತೂಕದಲ್ಲಿ ರೈತರಿಗೆ ಆಗುತ್ತಿರುವ ವಂಚನೆ ತಡೆಗಟ್ಟಬೇಕು, ರೈತರು ತಂದಿರುವ ಲಾರಿ, ಟ್ರಾಕ್ಟರ್ ಗಳಿಗೆ ಬಾಡಿಗೆ ಕೊಡಬೇಕು, ಮೇಲ್ವಿಚಾರಣೆಗೆ ಸಿಬ್ಬಂದಿ ನೇಮಿಸಬೇಕು, ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಪ್ರತಿಭಟನಾ ನಿರತ ರೈತರು ಪಟ್ಟು ಹಿಡಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು, ಪೊಲೀಸರು ಮದ್ಯಸ್ಥಿಕೆವಹಿಸಿ ಮನವೊಲಿಸಿದ ಬಳಿಕ, ರೈತರಿಂದ ಲಿಖಿತ ಮನವಿ ಪಡೆದ ಅಧಿಕಾರಿಗಳು ಈಗಿರುವ ಏಜೆನ್ಸಿಯೇ ಅರ್ಹರ ರಾಗಿ ಖರೀದಿಸಲು ಅವಕಾಶ ಕೊಟ್ಟರು. ಇದರಿಂದ ಸಮಧಾನಗೊಂಡ ರೈತರು ಪ್ರತಿಭಟನೆ ಹಿಂಪಡೆದರು. ಮದ್ಯಾಹ್ನ 2ಕ್ಕೆ ಆಗಮಿಸಿದ ಚಿಗಟೇರಿ ಗ್ರಾಮದ ಪಿಎಸಿಎಸ್ ಸಹಕಾರ ಸಂಘದ ಖರೀದಿದಾರರನ್ನು ಸ್ಥಳಕ್ಕೆ ಕರೆಯಿಸಿ ರಾಗಿ ತುಂಬಿಸಲು ಸೂಚಿಸಿದರು. ಮದ್ಯಾಹ್ನ 2 ಗಂಟೆಯಿಂದ ತೂಕ ಮಾಡುವ ಪ್ರಕ್ರಿಯೆ ಆರಂಭಗೊಂಡಿತು.
ಉಪವಿಬಾಗಾಧಿಕಾರಿ ಟಿ.ಸುರೇಶ್ ಕುಮಾರ ಮಾತನಾಡಿ, ರಾಗಿ ಖರೀದಿ ಕೇಂದ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಕಂದಾಯ ಇಲಾಖೆಯಿಂದ ಮೇಲ್ವಿಚಾರಣೆ ಅಧಿಕಾರಿ ನೇಮಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು ಮಾತನಾಡಿ, ‘ತೂಕ ಮಾಡುವ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ರೈತರಿಗೆ ವಂಚನೆ ಆಗದಂತೆ ಜಾಗೃತೆ ವಹಿಸಲಾಗುವುದು, ನೊಂದಾಯಿತ ಎಲ್ಲ ರೈತರಿಂದ ರಾಗಿ ಖರೀದಿಸಲಾಗುವುದು’ ಎಂದು ಸಿಪಿಐ ಮಹಾಂತೇಶ್ ಜಿ.ಸಜ್ಜನ್ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಮುಖಂಡ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವ ಕಾರಣ ಹೋಬಳಿಗೊಂದು ಖರೀದಿ ಕೇಂದ್ರ ಆರಂಭಿಸಲು ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘಟನೆ ರಾಜ್ಯ ಸಮಿತಿ ಅಧ್ಯಕ್ಷ ಗಿರಜ್ಜಿ ನಾಗರಾಜ್ ಮಾತನಾಡಿ, ತೂಕದಲ್ಲಿ ರೈತರಿಗೆ ವಂಚನೆ ಆಗಬಾರದು. ಸರ್ಕಾರಿ ನಿಯಮ ಅನುಸಾರವೇ ರಾಗಿ ತೂಕ ಮಾಡಬೇಕು ಎಂದು ಆಗ್ರಹಿಸಿದರು. ಕೆಎಸ್ಎಫ್ಸಿ ಜಿಲ್ಲಾ ವ್ಯವಸ್ಥಾಪಕ ರಿಯಾಜ್, ಉಪನಿರ್ದೇಶಕ ಗುರುರಾಜ್, ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ, ಎಪಿಎಂಸಿ ಕಾರ್ಯದರ್ಶಿ ಶ್ರೀಕಾಂತ ಆರ್.ಗುಳೇದ, ಮುಖಂಡರಾದ ಪುಣಬಗಟ್ಟಿ ಮಂಜಪ್ಪ, ಬಸವರಾಜ್, ಮಂಜುನಾಥ, ದುರುಗಪ್ಪ, ನಾಗಪ್ಪ, ರುದ್ರಪ್ಪ, ಶಿವಕುಮಾರ, ರಾಜಶೇಖರ ಹಾಗೂ ರೈತರಿದ್ದರು.
Leave a comment