ಹರಪನಹಳ್ಳಿ : ಧಾರ್ಮಿಕ ಕಾರ್ಯಗಳು ಜನತೆಯಲ್ಲಿ ಹೊಸ ಸಂಸ್ಕೃತಿಯನ್ನು ಮೂಡಿಸಲು ಸಹಕಾರಿಯಾಗಿವೆಯಲ್ಲದೆ ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಇಜಂತಕರ್ ಹೇಳಿದರು.
ನಗರದ ಹರಿಹರ ರಸ್ತೆಯ ಆದಿಬಸವೇಶ್ವರ ಬಡಾವಣೆಯಲ್ಲಿ ಶ್ರೀ ವರಕೈ ಆಂಜನೇಯ ಸ್ವಾಮಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಆಂಜನೇಯಸ್ವಾಮಿ ಕಾರ್ತಿಕೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯನ ಜೀವನ ಕ್ಷಣಿಕ, ಧಾನ, ಧರ್ಮಗಳನ್ನು ಮಾಡುವ ಮೂಲಕ ಮಾನವ ಜೀವನ ದಲ್ಲಿ ಸಾರ್ಥಕತೆ ಹೊಂದಬೇಕು. ಹಸಿದವರಿಗೆ ಅನ್ನ ಕೊಡುವುದು ಪುಣ್ಯದ ಕೆಲಸ, ಮತ್ತು ಅದೇ ಧರ್ಮ ಎನಿಸುತ್ತದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ. ಅಶೋಕ ಹರಾಳು ಮಾತನಾಡಿ, ಹೊಸ ಚೈತನ್ಯವನ್ನು ನೀಡುವುದಕ್ಕೆ ಕಾರ್ತಿಕ ಮಾಸದ ದೀಪೋತ್ಸವ ಸಾಕ್ಷಿಯಾಗಲಿದೆ. ಬಾಳಿನ ಉನ್ನತಿ ಮತ್ತು ಅವನತಿಗಳಿಗೆ ಮನುಷ್ಯನ ಮನಸ್ಸೇ ಕಾರಣವಾಗಿದೆ ಮನುಷ್ಯ ಬದುಕಿನಲ್ಲಿ ನೀತಿ ಸಂಹಿತೆ ಸದಾಚಾರ ಸಂಪನ್ನಮ ಧಾರ್ಮಿಕ ಗುಣಗಳನ್ನು ಅಳವಡಿಸಿಕೊಂಡು ಬಾಳಿದರೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಪ್ರಾಪ್ತಿ ಆಗುತ್ತದೆ ಎಂದು ತಿಳಿಸಿದರು.
ವಕೀಲ ಕೋಡಿಹಳ್ಳಿ ಪ್ರಕಾಶ ಮಾತನಾಡಿ, ಕಾರ್ತಿಕೋತ್ಸವ ಎಂದರೆ ಕತ್ತಲೆ ಹೋಗಲಾಡಿಸಿ ಬೆಳಕು ಚೆಲ್ಲುವ ಹಬ್ಬವಾಗಿದೆ. ದೀಪವು ತಾನು ಉರಿದು ಎಲ್ಲರಿಗೂ ಬೆಳಕು ನೀಡುತ್ತದೆ ಹಾಗೆ ಮನುಷ್ಯನು ತನ್ನ ಜೀವನದಲ್ಲಿ ದೀಪದಂತೆ ಎಲ್ಲರಿಗೂ ಒಳಿತನ್ನು ಬಯಸಿ ಬೆಳಕು ನೀಡಬೇಕು.
ಬೆಳಗುವ ಜ್ಯೋತಿಗೆ ಯಾವುದೇ ಜಾತಿಯಿಲ್ಲ. ಸಮಾಜದಲ್ಲಿಜಾತಿ, ಮತ, ಪಂಥವೆನ್ನದೆ ಎಲ್ಲರೂ ಸಮಾನವಾಗಿ ಬಾಳಬೇಕು. ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ತನ್ನ ಜೀವನದಲ್ಲಿ ಒಳ್ಳೆಯ ಕಾರ್ಯ ಮಾಡಬೇಕು. ಕತ್ತಲೆ ಅಳೆದು ಜ್ಞಾನದ ದೀಪ ಬೆಳಗಲಿ ಎಂದರು. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಕೆ.ಉಚ್ಚೆಂಗೆಪ್ಪ, ವಾಲ್ಮೀಕಿ ನಾಯಕ ಸಮಾಜದ ಕಾರ್ಯದರ್ಶಿ ಜಿಟ್ಟಿನಕಟ್ಟಿ ಮಂಜುನಾಥ, ಶ್ರೀ ವರಕೈ ಆಂಜನೇಯ ಸ್ವಾಮಿ ಸೇವಾ ಸಮಿತಿಯ ಆಲೂರು ಶ್ರೀನಿವಾಸ, ಹಳೇಬ್ಯಾಡರ ಪರಸಪ್ಪ, ಎಂ.ಜಾಪರ್ ಸಾಹೇಬ್,ಕೆ.ಹಾಲಪ್ಪ, ಬೆಲ್ಲದ ಅಂಜಿನಪ್ಪ, ವೇಷಗಾರ ರಾಮಪ್ಪ, ದಾವಣಗೆರೆ ಊರಪ್ಪ, ಅರ್ಚಕ ಕೆ.ತಿರುಮಲ, ಕೆ.ಸೋಮಶೇಖರ, ಇದ್ಲಿ ಮಂಜುನಾಥ, ದಾಸರ ಮಂಜಪ್ಪ, ಯಲ್ಲಜ್ಜಿ ಹನುಮಂತಪ್ಪ, ಶಿರಹಟ್ಟಿ ಸಣ್ಣ ದುರುಗಪ್ಪ ಇದ್ದರು.
Leave a comment