ಜಗಳೂರು: ಬೇಸಿಗೆಯ ಬಿಸಿಲಿನ ಝಳ ದಿನೇ ದಿನೇ ಹೆಚ್ಚಾಗುತ್ತಿದ್ದು, ಕೆರೆ-ಕಟ್ಟೆಗಳು ಒಣಗಲಾರಂಭಿಸಿವೆ. ಆಹಾರ ಮತ್ತು ನೀರಿಗಾಗಿ ಮೂಕ ಪ್ರಾಣಿ-ಪಕ್ಷಿಗಳು ಪರದಾಡುವಂತಹ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಜಗಳೂರು ತಾಲೂಕಿನ ರಂಗಯ್ಯನದುರ್ಗ ಅರಣ್ಯದಲ್ಲಿರುವ ಏಷ್ಯಾದ ಅತ್ಯಂತ ಅಪರೂಪದ ‘ಕೊಂಡುಕುರಿ’ ಸಂತತಿ ಸಂರಕ್ಷಿಸಬೇಕು ಹಾಗೂ ಇದನ್ನೊಂದು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್, “ಏಷ್ಯಾ ಖಂಡದಲ್ಲೇ ಅಳಿವಿನಂಚಿನಲ್ಲಿರುವ ಕೊಂಡುಕುರಿಗಳು ನಮ್ಮ ರಂಗಯ್ಯನದುರ್ಗ ಅರಣ್ಯದಲ್ಲಿರುವುದು ವಿಶೇಷ. ಗಂಡು ಕೊಂಡುಕುರಿಗೆ ನಾಲ್ಕು ಕೊಂಬುಗಳಿದ್ದು ನೋಡಲು ಅತ್ಯಾಕರ್ಷಕವಾಗಿರುತ್ತದೆ. ಜಿಂಕೆಯಷ್ಟೇ ಸೂಕ್ಷ್ಮ ಹಾಗೂ ನಾಚಿಕೆ ಸ್ವಭಾವದ ಈ ಪ್ರಾಣಿಯನ್ನು ವಿಶ್ವದ ಅತಿ ವಿನಾಶದಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಇದರ ಸಂರಕ್ಷಣೆ ಅತ್ಯಗತ್ಯ. ಈ ವನ್ಯಜೀವಿ ಧಾಮದಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ತೆರೆಯುವಂತೆ ಸಚಿವರ ಗಮನಕ್ಕೆ ತರಲಾಗುವುದು. ಇದರಿಂದ ವಿಜ್ಞಾನಿಗಳು ಹಾಗೂ ಯುವ ಸಂಶೋಧಕರಿಗೆ ಅನುಕೂಲವಾಗಲಿದೆ,” ಎಂದರು.
ಮನೆಯಂಗಳದಲ್ಲಿರಲಿ ಒಂದು ಪಾತ್ರೆ ನೀರು
“ಮುಂದಿನ ಮೂರು ತಿಂಗಳು ಕಠಿಣ ಬೇಸಿಗೆ ಇರಲಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ, ಟೆರೇಸ್ ಮೇಲೆ ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಗೂ ಸ್ವಲ್ಪ ಕಾಳು-ಕಡಿಗಳನ್ನು ಇಡಬೇಕು. ನಿಮ್ಮ ಈ ಸಣ್ಣ ಪ್ರಯತ್ನ ಒಂದು ಪಕ್ಷಿಯ ಅಥವಾ ಪ್ರಾಣಿಯ ಜೀವ ಉಳಿಸಬಹುದು,” ಎಂದು ಮಾಲತೇಶ್ ಅರಸ್ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮಳೆಗಾಲದಲ್ಲಿ ಗಿಡ ನೆಡುವ ಅಭಿಯಾನ
ದಾರಿದೀಪ ಸೇವಾ ಟ್ರಸ್ಟ್ನ ಅಧ್ಯಕ್ಷೆ ಎಸ್. ಸುಜಾತ ಮಾತನಾಡಿ, “ಮಹಿಳೆಯರು ಮನಸ್ಸು ಮಾಡಿದರೆ ಪ್ರಕೃತಿ ಸಂರಕ್ಷಣೆ ಸುಲಭ. ಮನೆಯ ಮಕ್ಕಳ ಜೊತೆ ಪಕ್ಷಿಗಳನ್ನೂ ನಮ್ಮ ಮಕ್ಕಳಂತೆಯೇ ಭಾವಿಸಿ ನೀರು-ಆಹಾರ ನೀಡಬೇಕು. ಜಗಳೂರು ನಗರದ ಪ್ರಮುಖ ಭಾಗಗಳಲ್ಲಿ ಸಿಮೆಂಟ್ ತೊಟ್ಟಿಗಳನ್ನು ಇಡಲಾಗುವುದು; ಯಾರು ಬೇಕಾದರೂ ಅದಕ್ಕೆ ನೀರು ತುಂಬಿಸಬಹುದು. ಮುಂಬರುವ ಮಳೆಗಾಲದಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು,” ಎಂದು ತಿಳಿಸಿದರು.
ಕಾಂಕ್ರೀಟ್ ಕಾಡಿನಿಂದ ಆವಾಸಸ್ಥಾನ ನಷ್ಟ
ಕರ್ನಾಟಕ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಮನು ಎಂ. ದೇವನಗರಿ ಆತಂಕ ವ್ಯಕ್ತಪಡಿಸಿ, “ಹಿಂದೆ ಇದ್ದಂತಹ ಹಣ್ಣಿನ ಮರಗಳು, ಕುರುಚಲು ಕಾಡುಗಳು ಇಂದು ರಿಯಲ್ ಎಸ್ಟೇಟ್, ಲೇಔಟ್ಗಳ ಪಾಲಾಗಿವೆ. ಆಶ್ರಯವಿಲ್ಲದೆ, ಆಹಾರ-ನೀರಿಲ್ಲದೆ ವನ್ಯಜೀವಿಗಳು ಕಂಗಾಲಾಗಿವೆ. ಇದರಿಂದಲೇ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದೆ. ಈ ಬೇಸಿಗೆಯಲ್ಲಿ ಮನುಷ್ಯತ್ವ ಮರೆಯದೆ, ಮೂಕ ಜೀವಿಗಳಿಗೆ ದಯೆ ತೋರೋಣ. ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿ ಪ್ರಕೃತಿ ಉಳಿಸುವ ಕಾಯಕ ಮಾಡೋಣ,” ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಾರಿದೀಪ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಜಯನ್, ಪ್ರಧಾನ ಕಾರ್ಯದರ್ಶಿ ಎಸ್. ನೇತ್ರಾವತಿ, ಸಂಘಟನಾ ಕಾರ್ಯದರ್ಶಿ ವೈ.ಜಿ. ಉಮಾದೇವಿ, ಖಜಾಂಚಿ ಎನ್.ಬಿ. ಗಾಯತ್ರಿ, ಸಂಚಾಲಕ ಚೌಡಪ್ಪ, ನಿರ್ದೇಶಕ ಎಸ್.ಜಿ. ರಾಜಪ್ಪ, ಫೋಟೋಗ್ರಾಫರ್ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Leave a comment