ಕೊಟ್ಟೂರು: ಸಮಾಜದ ಲೋಪದೋಷಗಳನ್ನು ಎತ್ತಿಹಿಡಿಯುವ ಮೂಲಕ ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ಎದುರಾಗುವ ಸವಾಲುಗಳಿಗೆ ಧೃತಿಗೆಡದೆ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ರಾಜ್ಯ ಜೆಡಿಎಸ್ ವಕ್ತಾರ ಎನ್. ರಾಜುಗೌಡ ಕರೆ ನೀಡಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ತಾಲ್ಲೂಕು ಘಟಕದ ವತಿಯಿಂದ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ‘ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ರಾಜಕೀಯ ಮುಖಂಡರ ಪರವಾಗಿ ಬರೆದರೆ ಹೊಗಳುವ ಹಾಗೂ ಸತ್ಯವನ್ನು ಬರೆದರೆ ಹಲ್ಲೆಗೆ ಮುಂದಾಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇಂತಹ ಬೆದರಿಕೆಗಳಿಗೆ ಜಗ್ಗದೆ ಪತ್ರಕರ್ತರು ಒಗ್ಗಟ್ಟು ಪ್ರದರ್ಶಿಸಬೇಕು” ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ದೊಡ್ಡರಾಮಣ್ಣ ಮಾತನಾಡಿ, “ಪತ್ರಕರ್ತರು ಒಗ್ಗಟ್ಟಾಗಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ತಪ್ಪು ಮಾಡಿದ ರಾಜಕಾರಣಿಗಳನ್ನು ಸರಿದಾರಿಗೆ ತರುವ ದಿಟ್ಟತನವನ್ನು ಪತ್ರಿಕಾರಂಗ ತೋರಬೇಕು” ಎಂದು ಕಿವಿಮಾತು ಹೇಳಿದರು.
ಸಮಾಜದ ಸ್ವಾಸ್ಥ್ಯ ಕಾಪಾಡುವ ಜವಾಬ್ದಾರಿ
ಬಿ.ಡಿ.ಸಿ.ಸಿ. ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ ಮಾತನಾಡಿ, “ಪತ್ರಿಕೋದ್ಯಮ ಕೇವಲ ವರದಿಯಲ್ಲ, ಅದೊಂದು ಸಾಮಾಜಿಕ ಜವಾಬ್ದಾರಿ. ಡಿಜಿಟಲ್ ಮಾಧ್ಯಮಗಳ ಭರಾಟೆಯಲ್ಲಿ ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತಿವೆ. ಪತ್ರಕರ್ತರು ಇವುಗಳನ್ನು ವಿಶ್ಲೇಷಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು” ಎಂದು ಅಭಿಪ್ರಾಯಪಟ್ಟರು.
ವಿ.ಟಿ.ಎಸ್. ತಿಪ್ಪೇಸ್ವಾಮಿ ವೆಂಕಟೇಶ ಮಾತನಾಡಿ, “ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲತೆ ಹೆಚ್ಚಾಗುತ್ತಿದೆ. ಆದರೆ, ಮುದ್ರಣ ಮಾಧ್ಯಮವು ನೈಜತೆ ಹಾಗೂ ಮೌಲ್ಯಗಳನ್ನು ಉಳಿಸಿಕೊಂಡಿದೆ” ಎಂದರು. ಇದೇ ವೇಳೆ, ಪತ್ರಿಕಾ ಭವನದ ಕಚೇರಿಗೆ ಪ್ರತಿ ತಿಂಗಳು ಬಾಡಿಗೆ ಭರಿಸುವುದಾಗಿ ಅವರು ಘೋಷಿಸಿದರು.
ವಿಶ್ವಾಸ ಕಳೆದುಕೊಳ್ಳದಿರಿ: ಶ್ರೀಗಳ ಕಿವಿಮಾತು
ಸಾನ್ನಿಧ್ಯ ವಹಿಸಿದ್ದ ಕೊಟ್ಟೂರಿನ ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಖಡ್ಗಕ್ಕಿಂತ ಲೇಖನಿ ಹರಿತ ಎಂಬ ಮಾತು ಅಕ್ಷರಶಃ ಸತ್ಯ. ಸಂವಿಧಾನದ ಉಳಿದ ಮೂರು ಅಂಗಗಳನ್ನು ವಿಮರ್ಶಿಸುವ ಶಕ್ತಿ ಪತ್ರಿಕಾರಂಗಕ್ಕಿದೆ. ಆದರೆ, ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಪತ್ರಕರ್ತರು ಅವಸರಕ್ಕೆ ಬಿದ್ದು ಸಾರ್ವಜನಿಕರ ವಿಶ್ವಾಸ ಕಳೆದುಕೊಳ್ಳಬಾರದು” ಎಂದು ಎಚ್ಚರಿಸಿದರು.
ಪತ್ರಕರ್ತ ನಂದುಕುಮಾರ ಪೂಜಾರಿ ಮಾತನಾಡಿ, ‘ಮಂಗಳೂರು ಸಮಾಚಾರ’ವನ್ನು ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಅವರನ್ನು ಸ್ಮರಿಸಿದರು. ಭ್ರಷ್ಟಾಚಾರ ಹಾಗೂ ಮೂಢನಂಬಿಕೆಗಳ ವಿರುದ್ಧ ದನಿಯೆತ್ತುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ಒದಗಿಸುವ ಅಗತ್ಯವಿದೆ ಎಂದು ಕಳಕಳಿ ವ್ಯಕ್ತಪಡಿಸಿದರು.
ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಗಣ್ಯರು ಹಾಗೂ ಸಾಧಕರಿಗೆ ಸೂರತ್ನ ವಿಶೇಷ ಶಾಲು ಹಾಗೂ ಬೆಳಗಾವಿ ಪೇಟ ತೊಡಿಸಿ ಸನ್ಮಾನಿಸಲಾಯಿತು. ಜ್ಯೋತಿ ಮತ್ತು ಎಲ್ಲಪ್ಪ ಪ್ರಾರ್ಥಿಸಿದರು. ಬಿ. ರುಕ್ಮಿಣಿ ಅವರ ಭರತನಾಟ್ಯ ನೃತ್ಯ ರೂಪಕ ಗಮನ ಸೆಳೆಯಿತು. ಕಾರ್ಯಕ್ರಮದ ನಂತರ ಅನ್ನದಾಸೋಹ ಏರ್ಪಡಿಸಲಾಗಿತ್ತು. ರಾಜ್ಯ ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳಿದ್ದರು.
ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
ಇದೇ ವೇಳೆ ಕರ್ನಾಟಕ ಪ್ರೆಸ್ ಕ್ಲಬ್ನ ಕೊಟ್ಟೂರು ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
- ರಾಜ್ಯ ಉಪಾಧ್ಯಕ್ಷರು: ಕೆ. ಕೊಟ್ರೇಶ್
- ವಿಜಯನಗರ ಜಿಲ್ಲಾ ಉಪಾಧ್ಯಕ್ಷರು: ಡಿ. ಸಿದ್ದಪ್ಪ
- ತಾಲ್ಲೂಕು ಅಧ್ಯಕ್ಷರು: ತಗ್ಗಿನಕೇರಿ ಕೊಟ್ರೇಶ್
- ಕಾರ್ಯಾಧ್ಯಕ್ಷರು: ಹೆಚ್. ವಿಜಯಕುಮಾರ್
- ಪ್ರಧಾನ ಕಾರ್ಯದರ್ಶಿ: ಎಸ್. ಪ್ರಕಾಶ್
- ಉಪಾಧ್ಯಕ್ಷರು: ಎಸ್. ಪರಶುರಾಮ್, ಸುಹೇಬ್ ವಲಿ ಕೆ., ಹೆಚ್. ದಾದಾಪೀರ್
- ಸಹಕಾರ್ಯದರ್ಶಿ: ಶಿವರಾಜ ಕನ್ನಡಿಗ
- ಖಜಾಂಚಿ: ರೇವಂತ್ ಜಂಬೂರ್
- ಸಂಘಟನಾ ಕಾರ್ಯದರ್ಶಿ: ಕೊಟ್ರೇಶ್
Leave a comment